ನಾಲತವಾಡ: ರೈತರ ಜಮೀನಿನಲ್ಲಿ ಕೈಗೊಳ್ಳುತ್ತಿರುವ ವಿದ್ಯುತ್ ಸ್ಥಾವರದ ಕಾಮಗಾರಿ ನಿಲ್ಲಿಸದಿದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಬಿರಾದಾರ ಎಚ್ಚರಿಸಿದರು.
ಸಮೀಪದ ಚೆಕ್ಪೋಸ್ಟ್ ಬಳಿ ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ನಾವು ಹೋರಾಟ ಮಾಡುತ್ತಿದ್ದರೂ ಯಾವೊಬ್ಬ ಅಧಿಕಾರಿ ಸ್ಪಂದಿಸಿಲ್ಲ. ಜಮೀನುಗಳಲ್ಲಿ ವಿದ್ಯುತ್ ಕಂಬ ನಡೆವು ಕಾರ್ಯ ಮುಂದುವರೆದಿದೆ. ಆದ್ದರಿಂದ ಇಂದಿನಿಂದ ಹೋರಾಟದ ರೂಪರೇಷೆಗಳನ್ನು ಬದಲಾವಣೆ ಮಾಡುತ್ತಿದ್ದೇವೆ. ಫೆ.22ರಂದು ಬೆಳಗ್ಗೆ 8 ಗಂಟೆಗೆ ನಾಲತವಾಡ-ನಾರಾಯಣಪುರ ಮುಖ್ಯ ರಸ್ತೆ ಸಂಚಾರ ತಡೆದು ಹೋರಾಟ ನಡೆಸಲಾಗುವುದು. ಒಂದು ವೇಳೆ ಅದಕ್ಕೂ ಜಗ್ಗದಿದ್ದರೇ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದವರು ಎಚ್ಚರಿಸಿದರು.
ಸ್ಥಳೀಯ ಶಾಸಕರು ರೈತರಪರ ಹೋರಾಟಗಾರರಿದ್ದು, ರೈತರಿಗೆ ಅನ್ಯಾಯವಾಗುತ್ತಿದೆ. ತಾವು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳ ಹಾಗೂ ರೈತರ ದಾಖಲೆಗಳನ್ನು ಪರಿಶೀಲಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ರೈತರು ಹೋರಾಟ ಹಮ್ಮಿಕೊಂಡಿರುವ ಮತ್ತು ಇಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಪೊಲೀಸ್ ಇಲಾಖೆಯವರು ಮೇಲಧಿಕಾರಿಗಳಿಗೆ ನೈಜ ಸ್ಥಿತಿ ತಿಳಿಸಬೇಕು ಎಂದರು.
ರಾಜಕೀಯ ಪ್ರಭಾವಿಗಳಿಂದ ಆಮಿಷ
ನಾಗಬೇನಾಳ ರೈತರ ಪರ ಹೋರಾಟ ಮಾಡುತ್ತಿರುವ ಸಿದ್ದಣ್ಣ ಬಿರಾದಾರ ಅವರಿಗೆ ಒಬ್ಬ ರಾಜಕೀಯ ಪ್ರಭಾವಿ ಖಾಲಿ ಚೆಕ್ ನೀಡಿ ಅದರಲ್ಲಿ ಎಷ್ಟು ಬೇಕಾದರೂ ಬರದುಕೊಳ್ಳಿ. ಆದರೆ, ಈ ಹೋರಾಟ ಕೈಬಿಡಿ ಎಂದು ಆಮಿಷ ಒಡಿದ್ದರೂ ಅದನ್ನು ಧಿಕ್ಕರಿಸಿ ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇನೆ,. ಯಾವುದೇ ಕಾರಣಕ್ಕೂ ಈ ಹೋರಾಟದಿಂದ ಹಿಂದೆ ಸರಿಯಲ್ಲ. ಎಂದವರು ತಿಳಿಸಿದ್ದಾರೆ.
ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ಯಾದಗಿರಿ ಜಿಲ್ಲಾ ಉಪಾಧ್ಯಕ್ಷ ಹಣಮಗೌಡ ಪಾಟೀಲ, ವೈ.ಎಲ್. ಬಿರಾದಾರ, ಮುದ್ದೇಬಿಹಾಳ ತಾಲೂಕು ಅಧ್ಯಕ್ಷ ಅಯ್ಯಣ್ಣ ಬಿದರಕುಂದಿ, ಸುರಪುರ ತಾಲೂಕಾಧ್ಯಕ್ಷ ಸಾಹೇಬಗೌಡ ಪಾಟೀಲ, ರೈತ ಸಂಘದ ತಾಲೂಕಾಧ್ಯ್ಕಷೆ ರಜಿಯಾ ನದಾಫ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.