ಬಳ್ಳಾರಿ: ನಗರದ ನಾಗಲಕೆರೆಯ ಜನವಸತಿ ಪ್ರದೇಶದಲ್ಲಿ ಶುಕ್ರವಾರ ಮಧ್ಯರಾತ್ರಿ ಮೊಸಳೆ ಕಾಣಿಸಿಕೊಂಡಿದ್ದರಿಂದ ಜನರು ಆತಂಕಕ್ಕೀಡಾಗಿದ್ದರು. ಮಧ್ಯರಾತ್ರಿ ಮೊಸಳೆ ನೋಡಿದ ಜನರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆ ಹಿಡಿದು ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ ಬಿಟ್ಟು ಬಂದರು. ಈ ಕುರಿತು ಪ್ರತಿಕ್ರಿಯಿಸಿದ ಡಿಸಿಎಫ್ ರಮೇಶ ಕುಮಾರ್, ನಾಗಲಕೆರೆ ಪ್ರದೇಶದಲ್ಲಿ ಮೊಸಳೆ ಇರುವ ಬಗ್ಗೆ ಮಾಹಿತಿ ಇತ್ತು. ಶುಕ್ರವಾರ ಹೊರಗೆ ಬಂದಿರುವ ಮಾಹಿತಿ ತಿಳಿದ ಕೂಡಲೇ ನಮ್ಮ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೊಸಳೆಯನ್ನು ತುಂಗಭದ್ರಾ ಅಣೆಕಟ್ಟೆಯಲ್ಲಿ ಬಿಟ್ಟು ಬಂದಿದ್ದಾರೆ. ಈಗ ನಾಗಲಕೆರೆ ಪ್ರದೇಶದಲ್ಲಿ ಯಾವುದೇ ಆತಂಕ ಇಲ್ಲ ಎಂದು ತಿಳಿಸಿದರು.