ಮೈಸೂರು: ಮೂರ್ನಾಲ್ಕು ದಿನದಿಂದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹುಣಸೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಪಿ. ಮಂಜುನಾಥ್ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದರು. ಶುಕ್ರವಾರ ಶಾಸಕರ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ್ದ ಎಂಎಲ್ಸಿ ರಘು ಆಚಾರ್ ಕೂಡ ಡಿಸಿ ವಿರುದ್ಧ ಕಿಡಿಕಾರಿದ್ದರು. ರೋಹಿಣಿ ಸಿಂಧೂರಿ ಅವರು ಐಎಎಸ್ ಪಾಸ್ ಮಾಡಿದ್ದಾರಾ? ಅನ್ನೋದೆ ನನಗೆ ಡೌಟು. ಬೇಸಿಕ್ ನಾಲೆಡ್ಜ್ ಇಲ್ಲದ ಐಎಎಸ್ ಅಧಿಕಾರಿ ಎಂದೆಲ್ಲ ಟೀಕಿಸಿದ್ದರು. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿಗೆ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಶಿಷ್ಟಾಚಾರಾದ ಪಾಠ ಮಾಡಿದ್ದಾರೆ.
ಶನಿವಾರ ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾ.ರಾ.ಮಹೇಶ್, ಕೆಡಿಪಿ ಸಭೆಯಲ್ಲಿ ವೇದಿಕೆ ಮೇಲೆ ಡಿಸಿ ಕುಳಿತು ಕೊಳ್ಳುವಂತಿಲ್ಲ. ಇದು ಪಾಲಿಸುವ ಹಾಗೂ ಇರುವ ಶಿಷ್ಟಾಚಾರ. ಇದೀಗ ಇದರ ಪಾಲನೆ ಆಗ್ತಿಲ್ಲ. ಮುಖ್ಯ ಕಾರ್ಯದರ್ಶಿ ಕೂಡ ಸಚಿವರ ಪಕ್ಕದಲ್ಲಿ ಕುಳಿತುಕೊಳ್ಳುವ ಆಗಿಲ್ಲ. ಇದು ಕೆಡಿಪಿ ಸಭೆಯಲ್ಲಿ ಪಾಲನೆಯಾಗಬೇಕಾದ ಶಿಷ್ಟಾಚಾರ ಎಂದು ಮೈಸೂರು ಡಿಸಿ ರೋಹಿಣಿ ಸಿಂಧೂರಿಗೆ ಶಿಷ್ಟಾಚಾರದ ಪಾಠ ಮಾಡಿದರು.
ಮೈಸೂರು ಜಿಲ್ಲೆಯಲ್ಲಿ ಸ್ಪಂದನ ಕಾರ್ಯಕ್ರಮ ನಡೆಯಬೇಕು. ಇದು ಉತ್ತಮ ಕಾರ್ಯಕ್ರಮ. ಆದ್ರೆ ಈ ಬಗ್ಗೆ ಶಾಸಕರ ಗಮನಕ್ಕೂ ಬರಬೇಕು.ಶಾಸಕರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಾರೆ. ಅದನ್ನು ಮಾಡಿ ಅಂತಷ್ಟೇ ನಾವು ಕೇಳ್ತಿರೋದು ಎಂದು ಡಿಸಿ ವಿರುದ್ಧ ಸಾ.ರಾ.ಮಹೇಶ್ ಕಿಡಿಕಾರಿದರು.
ನಾನು ಇದುವರೆಗೂ ಹಲವು ಜಿಲ್ಲಾಧಿಕಾರಿಗಳನ್ನು ನೋಡಿದ್ದೇನೆ. ಯಾರೂ ಈ ರೀತಿ ಕಡೆಗಣಿಸಿರಲಿಲ್ಲ. ಈ ಬಗ್ಗೆ ಸದನದಲ್ಲಿ ನಾನು ಮಂಜುನಾಥ್ ಜತೆಗೂಡಿ ಹಕ್ಕುಚ್ಯುತಿ ಮಂಡಿಸುತ್ತೇನೆ ಎಂದರು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಹುಣಸೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಪಿ. ಮಂಜುನಾಥ್ ನಡುವಿನ ಆರೋಪ-ಪ್ರತ್ಯಾರೋಪ ಸಮರ ತಾರಕಕ್ಕೇರಿದೆ. ಆರಂಭದಲ್ಲಿ ಶಾಸಕ ಮಂಜುನಾಥ್ ಮೈಸೂರಿಗೆ ಇಬ್ಬರು ಮಹಾರಾಣಿಯರಿದ್ದಾರೆ, ಮೂರನೇಯವರ ಅವಶ್ಯಕತೆ ಇಲ್ಲವೆಂದು ಡಿಸಿ ವಿರುದ್ಧ ಕಿಡಿಕಾರಿದ್ದರು. ಅದಕ್ಕೆ ಪ್ರತಿಯಾಗಿ ರೋಹಿಣಿ ಸಿಂಧೂರಿ, ಪತ್ರದ ಮೂಲಕ ತಿರುಗೇಟು ನೀಡಿದ್ದರು. ಅಲ್ಲದೆ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಡಿಸಿಯನ್ನು ಹಿಟ್ಲರ್ಗೆ ಹೋಲಿಸಿ ವಾಗ್ದಾಳಿ ನಡೆಸಿದ್ದರು. ನಾನೂ ನಿಮ್ಮ ಬಗ್ಗೆ ವೈಯಕ್ತಿಕವಾಗಿ ಮಾತನಾಡಬಹುದು. ನಿಮ್ಮ ವೈಯಕ್ತಿಕ ವಿಚಾರ ಜಗಜ್ಜಾಹೀರಾಗಿದೆ ಎಂದು ಕಿಡಿಕಾರಿದ್ದರು. ಶಾಸಕರ ಆಕ್ರೋಶಕ್ಕೆ ಧ್ವನಿಗೂಡಿಸಿದ್ದ ಎಂಎಲ್ಸಿ ರಘು ಆಚಾರ್, ರೋಹಿಣಿ ಸಿಂಧೂರಿ ಐಎಎಸ್ ಪಾಸ್ ಮಾಡಿರೋದೇ ಅನುಮಾನ ಎಂದು ವಾಗ್ದಾಳಿ ನಡೆಸಿದ್ದರು.
ಮಹಾರಾಣಿ ಎಂದು ವ್ಯಂಗ್ಯವಾಡಿದ್ದ ಕಾಂಗ್ರೆಸ್ ಶಾಸಕನಿಗೆ ರೋಹಿಣಿ ಸಿಂಧೂರಿ ಟಾಂಗ್..!