ಬೆಂಗಳೂರು: ಮೈಸೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಅವರು ನಾಮಪತ್ರ ಸಲ್ಲಿಕೆ ಜತೆಗೆ ಆಸ್ತಿಯನ್ನೂ ಘೋಷಣೆ ಮಾಡಿದ್ದಾರೆ. ಈ ವೇಳೆ ಮೈಸೂರಿನ ರಾಜರಾಗಿರುವ ಯದುವೀರ್ ಅವರ ಆಸ್ತಿ ಕುರಿತಾಗಿ ಕೆಲವು ಚರ್ಚೆಗಳು ನಡೆಯುತ್ತಿವೆ.
ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಜ್ಯೋತಿಷಿಗಳ ಸೂಚನೆಯಂತೆ ನಾಮಪತ್ರ ಸಲ್ಲಿಸಿದರು. ತಾಯಿ ಪ್ರಮೋದಾದೇವಿ ಒಡೆಯರ್, ಶಾಸಕ ಶ್ರೀವತ್ಸ ಜತೆ ಸೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು. ಏಪ್ರಿಲ್ 3ರಂದು ಬೃಹತ್ ರ್ಯಾಲಿ ಮೂಲಕ ಅವರು ನಾಮಪತ್ರ ಸಲ್ಲಿಸಿದ್ದಾರೆ. ಯದುವೀರ್ ಅವರು ಆಸ್ತಿಯ ಕುರಿತ ಅಫಿಡವಿಟ್ಅನ್ನೂ ಚುನಾವಣಾ ಆಯೋಗಕ್ಕೆ ನೀಡಿದ್ದು, ಅವರ ಬಳಿ ನಗದು ಸೇರಿ ಒಟ್ಟು 4.99 ಕೋಟಿ ರೂ. ಆಸ್ತಿ ಇದೆ ಎಂದು ಉಲ್ಲೇಖಿಸಲಾಗಿದೆ.
ಯದುವೀರ್ ಒಡೆಯರ್ ಚರಾಸ್ತಿ ಮೌಲ್ಯ 4,99,59,303 ರೂಪಾಯಿ ಇದ್ದು, ಸದ್ಯ ಅವರ ಬಳಿ ಕೈಯಲ್ಲಿ ಒಂದು ಲಕ್ಷ ರೂಪಾಯಿ ನಗದು ಇದೆ. ಇನ್ನು ಯದುವೀರ್ ಒಡೆಯರ್ ಅವರ 2 ಬ್ಯಾಂಕ್ ಖಾತೆಗಳಲ್ಲಿ 23.55 ಲಕ್ಷ ಹಣ ಇದೆ. ಒಂದು ಕೋಟಿ ಮೌಲ್ಯದ ವಿವಿಧ ಕಂಪನಿಗಳಲ್ಲಿ ಬಾಂಡ್ ಮತ್ತು ಶೇರ್ ಹೊಂದಿದ್ದಾರೆ. ಇನ್ನು 4 ಕೆಜಿ ಚಿನ್ನ ಮತ್ತು 20 ಕೆಜಿ ಬೆಳ್ಳಿ ಇದೆ. ಯದುವೀರ್ ಅವರ ಪತ್ನಿ 1,04,25,000 ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂಬುದಾಗಿ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ. ಇನ್ನು ಇವರ ಪುತ್ರನ ಹೆಸರಿನಲ್ಲಿ 3.63 ಕೋಟಿ ರೂ. ಆಸ್ತಿ ಇದೆ. ಯದುವೀರ್ ಅವರ ಕುಟುಂಬದಲ್ಲಿ (ಪತ್ನಿ ಹಾಗೂ ಪುತ್ರ) ಯಾರೂ ಸಾಲ ಹೊಂದಿಲ್ಲ ಎಂಬುದಾಗಿ ಯದುವೀರ್ ಅವರು ಅಫಿಡವಿಟ್ನಲ್ಲಿ ಉಲ್ಲೇಖಿಸಿದ್ದಾರೆ.
ಯದುವೀರ್ ಅವರ ಬಳಿ 1 ಲಕ್ಷ ರೂ. ನಗದು ಇದ್ದರೆ, ಪತ್ನಿ ಬಳಿ 75 ಸಾವಿರ ರೂ. ಇದೆ. ಇನ್ನು, ಯದುವೀರ್ ಅವರ ಹೆಸರಿನಲ್ಲಿ ಬೈಕ್, ಕಾರು ಸೇರಿ ಯಾವುದೇ ವಾಹನವಿಲ್ಲ. ಗಮನಾರ್ಹ ಸಂಗತಿ ಎಂದರೆ, ಯದುವೀರ್ ಅವರು ಯಾವುದೇ ಬಗೆಯ ಸ್ಥಿರಾಸ್ತಿಯನ್ನು ಹೊಂದಿಲ್ಲ. ಇವರು ಆದಾಯ ತೆರಿಗೆಯನ್ನೂ ಬಾಕಿ ಉಳಿಸಿಕೊಂಡಿಲ್ಲ ಎಂದು ನಾಮಪತ್ರ ಅಫಿಡೆವಿಟ್ನಲ್ಲಿ ಘೋಷಿಸಿಕೊಂಡಿದ್ದಾರೆ.
ಇನ್ನು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಹಾರಾಜ ಆಗಿದ್ದರೂ ಸಹ ಅವರು ಯಾವುದೇ ಕೃಷಿ ಭೂಮಿ, ಸ್ವಂತ ಮನೆ ಹೊಂದಿಲ್ಲ. ವಾಣಿಜ್ಯ ಕಟ್ಟಡಗಳಿಲ್ಲ. ಬ್ಯಾಂಕ್ನಿಂದ ಸಾಲ ಸಹ ಪಡೆದಿಲ್ಲ. ಹಾಗೇ ಯಾವುದೇ ರೀತಿಯ ಆದಾಯ ತೆರಿಗೆ ಹಣ ಬಾಕಿ ಉಳಿಸಿಕೊಂಡಿಲ್ಲ. ಇನ್ನು ಬಿಜೆಪಿ ಅಭ್ಯರ್ಥಿ ಯದುವೀರ್ ವಿರುದ್ಧ ಯಾವ ಪ್ರಕರಣ ದಾಖಲಾಗಿಲ್ಲ ಎಂದು ಯದುವೀರ್ ಅಫಿಡವಿಟ್ನಲ್ಲಿ ಸ್ಪಷ್ಟಪಡಿಸಿದ್ದಾರೆ.