ಬೆಳಗಾವಿ: ಹಳ್ಳ-ಕೊಳ್ಳಗಳಂತಹ ನೈಸರ್ಗಿಕ ತಾಣಗಳಲ್ಲಿ ಸಿಗುವ ಮರಳನ್ನು ಸಂಗ್ರಹಿಸಿ ರಾಜ್ಯದ ಬಡವರಿಗೆ ಉಚಿತವಾಗಿ ಹಂಚಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಗಣಿ ಮತ್ತು ಭೂ ವಿಜ್ಞಾನ ಖಾತೆಯ ನೂತನ ಸಚಿವ ಮುರುಗೇಶ ನಿರಾಣಿ ಅವರು ಈ ವಿಷಯ ತಿಳಿಸಿದ್ದಾರೆ.
‘‘ಮರಳನ್ನು 5 ವಿಧದಲ್ಲಿ ವಿಂಗಡಿಸಲಾಗಿದ್ದು, ಸ್ಥಳೀಯವಾಗಿ ಹಳ್ಳ-ಕೊಳ್ಳಗಳಲ್ಲಿ ಲಭ್ಯವಾಗುವ ಮರಳನ್ನು ಬಡ ಜನತೆಗೆ ಉಚಿತವಾಗಿ ವಿತರಿಸುವ ಬಗ್ಗೆ ಚರ್ಚೆ ನಡೆದಿದೆ. ಇದರಿಂದಾಗುವ ನಷ್ಟವನ್ನು ಬೃಹತ್ ಪ್ರಮಾಣದಲ್ಲಿ ಮರಳು ಕೊಂಡುಕೊಳ್ಳುವವರಿಂದ ಭರಿಸಿಕೊಳ್ಳಲು ಯೋಚಿಸಲಾಗಿದೆ’’ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಹೇಳಿದರು.
ಇದನ್ನೂ ಓದಿ: ಕಳ್ಳನೆಂದುಕೊಂಡು ವ್ಯಕ್ತಿಯೊಬ್ಬನನ್ನು ಕಂಬಕ್ಕೆ ಕಟ್ಟಿಹಾಕಿ ಬಡಿದ ಜನರು!; ಆತನ ಜತೆಗಿದ್ದ ನಾಲ್ವರು ಪರಾರಿ…
ರಾಜ್ಯಾದ್ಯಂತ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಐದು ವಿಭಾಗಗಳಲ್ಲಿ 15 ದಿನಕ್ಕೊಮ್ಮೆ ಅದಾಲತ್ ಆಯೋಜಿಸಿ, ಕಾನೂನಾತ್ಮಕ ತೊಡಕು ನಿವಾರಿಸುವುದು ಮತ್ತು ನಿಯಮಗಳಂತೆ ಗಣಿಗಾರಿಕೆ ನಡೆಸುವವರಿಗೆ ಉತ್ತೇಜಿಸಲಾಗುವುದು. ವೈಜ್ಞಾನಿಕ ಹಾಗೂ ಕಾನೂನಾತ್ಮಕವಾಗಿ ಖನಿಜ ಸಂಪನ್ಮೂಲ ಸದ್ಬಳಕೆಗೆ ಹಾಗೂ ಸುರಕ್ಷಿತ ಗಣಿಗಾರಿಕೆಗೆ ಆದ್ಯತೆ ನೀಡಲು ರಾಜ್ಯದಲ್ಲಿ ಗಣಿಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಅನಕ್ಷರಸ್ಥರೇ ಹೆಚ್ಚಿನ ಸಂಖ್ಯೆಯಲ್ಲಿ ಕ್ವಾರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಕಾನೂನು ಪಾಲನೆಯಾಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ವೃತ್ತಿಪರತೆ ಹಾಗೂ ಕಾನೂನು ಪಾಲನೆಯ ಶಿಕ್ಷಣ ನೀಡುವ ಉದ್ದೇಶದಿಂದ ರಾಜ್ಯದಲ್ಲಿ ಕೋರ್ಸ್ ಆರಂಭಿಸಿ, ಶೈಕ್ಷಣಿಕ ತರಬೇತಿ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ಸೋಮವಾರ ವಿಕಾಸ ಸೌಧದಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ಕರೆಯಲಾಗಿದೆ. ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಮರಳು ಮತ್ತು ಕಲ್ಲು ಸೇರಿದಂತೆ ಇಲಾಖೆ ವ್ಯಾಪ್ತಿಗೊಳಪಡುವ ವಿವಿಧ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು, ಬೇಡಿಕೆ ಮತ್ತು ಪೂರೈಕೆದಾರರ ನಡುವೆ ನೇರ ಸಂಪರ್ಕ ಸಾಧಿಸಲು ರಾಜ್ಯದಲ್ಲಿ ‘ಸ್ಟೋನ್ ಪಾರ್ಕ್’ ನಿರ್ಮಿಸಲಾಗುವುದು. ಆರಂಭದಲ್ಲಿ ಹೆಚ್ಚು ಗಣಿಗಾರಿಕೆ ನಡೆಯುವ ಒಂದೇ ಜಿಲ್ಲೆಯಲ್ಲಿ ಆರಂಭಿಸಿ, ಬಳಿಕ ವಿಸ್ತರಣೆ ಮಾಡಲಾಗುವುದು. ಹಟ್ಟಿ ಚಿನ್ನದ ಗಣಿಯಲ್ಲಿ ವರ್ಷಕ್ಕೆ ಕೋಟಿಗಟ್ಟಲೆ ಹಣವನ್ನು ವಿದ್ಯುತ್ ಖರೀದಿಗೆ ವ್ಯಯಿಸಲಾಗುತ್ತಿದೆ. ಅನಗತ್ಯ ವೆಚ್ಚ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ವಿದ್ಯುತ್ತನ್ನು ಸ್ವತಃ ಉತ್ಪಾದಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ನಿರಾಣಿ ತಿಳಿಸಿದರು.
ಲಸಿಕೆ ಹಾಕಿಸಿಕೊಂಡಿದ್ದ ವೈದ್ಯರಿಗೂ ಕೋವಿಡ್-19 ಪಾಸಿಟಿವ್; ಏಳು ವೈದ್ಯರಲ್ಲಿ ಸೋಂಕು ಪತ್ತೆ!
ಅಲ್ಲಿ ಸಿಕ್ಕಾಪಟ್ಟೆ ಕಿತ್ತಾಡಿಕೊಂಡ್ರು… ಇಲ್ಲಿ ಬಂದು ಅಪ್ಪಿಕೊಂಡು ಮುದ್ದಾಡಿದ್ರು…
ಪಂಚಮಸಾಲಿ ಮೀಸಲಾತಿಗಾಗಿ ಈಗ ಮೈಕ್ ಹಿಡಿದವರು ಹಿಂದೆ ಎಲ್ಲಿದ್ದರು: ನಿರಾಣಿ ಪ್ರಶ್ನೆ