ಮುಂಬೈ: ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ ಮುಂಬೈ ನಿವಾಸ ಅಂಟಿಲಿಯಾ ಬಳಿ ಕಳೆದ ತಿಂಗಳು ಸ್ಪೋಟಕ ತುಂಬಿದ ಕಾರ್ ಒಂದು ಪತ್ತೆಯಾಗಿದ್ದ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯ ಎನ್ಐಎ ಗೆ ವಹಿಸಿದೆ.
ಈ ಕುರಿತು ಸೋಮವಾರ ಆದೇಶ ಹೊರಡಿಸಿರುವ ಗೃಹ ಸಚಿವಾಲಯ, ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಆಂಟಿ ಟೆರರಿಮ್ ಸ್ಕ್ವಾಡ್ನಿಂದ (ಎಟಿಎಸ್) ಎನ್ಐಎ ಗೆ ವಹಿಸಲಾಗುತ್ತಿದೆ ಎಂದು ತಿಳಿಸಿದೆ.
ಫೆ 25 ರಂದು ಮುಕೇಶ್ ಅಂಬಾನಿ ನಿವಾಸದ ಎದುರು ಜಿಲೆಟಿನ್ ಕಡ್ಡಿಗಳನ್ನು ತುಂಬಿದ್ದ ಸ್ಕಾರ್ಪಿಯೋ ಕಾರ್ ಒಂದು ಪತ್ತೆಯಾಗಿ ಸಾಕಷ್ಟು ಆತಂಕ ಮೂಡಿಸಿತ್ತು. ವ್ಯಾಪಕ ತನಿಖೆ ನಡೆಸಿದ್ದ ಪೊಲೀಸರು ಕಾರ್ ಮಾಲೀಕನನ್ನು ಪತ್ತೆ ಹಚ್ಚಿದ್ದರು. ಕಾರ್ ಮಾಲೀಕ ಎಂದು ಹೇಳಲಾದ ಮನ್ಸುಕ್ ಹಿರೇನ್ ಎಂಬಾತ ಬಂಧನಕ್ಕೂ ಮುಂಚೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ.
ಇದನ್ನೂ ಓದಿ: ಉತ್ತರ ಕರ್ನಾಟಕದ ಶಾಸಕರು ಗೋವಾದಲ್ಲಿ ಹನಿಟ್ರ್ಯಾಪ್ಗೆ ಒಳಗಾಗುವ ಸಾಧ್ಯತೆ
ಇನ್ನು ಘಟನೆ ಬೆಳಕಿಗೆ ಬಂದ ಎರಡು ದಿನದ ನಂತರ ಅನಾಮಿಕರ ಹೆಸರಿನಲ್ಲಿ, ಇದು ಟ್ರೈಲರ್ ಮಾತ್ರ ಎಂದು ಬೆದರಿಕೆ ಪತ್ರ ಕಾರ್ನಲ್ಲಿ ಸಿಕ್ಕಿತ್ತು. ಹೀಗಾಗಿ ತನಿಖೆ ಕೈಗೆತ್ತಿಕೊಂಡಿದ್ದ ಎಟಿಎಸ್ ಉಗ್ರಗಾಮಿ ಸಂಘಟನೆಗಳ ಮೇಲೆ ಅನುಮಾನ ವ್ಯಕ್ತಪಡಿಸಿತ್ತು. ಇಷ್ಟೇ ಅಲ್ಲದೇ ಜೈಷೇ ಉಲ್ ಹಿಂದ್ ಎನ್ನುವ ಸಂಘಟನೆ ಘಟನೆ ಹೊಣೆ ಹೊತ್ತಿಕೊಂಡಿರುವುದಾಗಿ ವರದಿಯಾಗಿತ್ತು. ಆದರೆ, ನಂತರ ಆ ಸಂಘಟನೆ ಅದನ್ನು ನಿರಾಕರಿಸಿತ್ತು.