ಮುದಗಲ್: ದಾಸ ಶ್ರೇಷ್ಠ ಭಕ್ತ ಕನಕದಾಸರ 535ನೇ ಜಯಂತಿಯನ್ನು ಪಟ್ಟಣದಲ್ಲಿ ಸೋಮವಾರ ಅದ್ದೂರಿಯಾಗಿ ಆಚರಿಸಲಾಯಿತು. ಮೇಗಳಪೇಟೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಏಳು ಅಡಿ ಎತ್ತರದ ಪುತ್ಥಳಿ ಪ್ರತಿಷ್ಠಾಪಿಸಲಾಯಿತು. ಬೆಳಗ್ಗೆ ಕನಕದಾಸರ ಭಾವಚಿತ್ರ ಮತ್ತು ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಕುಂಭ ಹಾಗೂ ಡೊಳ್ಳು ವಾದ್ಯ ಮೇಳದೊಂದಿಗೆ ಲಿಂಗಸುಗೂರು ರಸ್ತೆ ಪಕ್ಕದ ಶ್ರೀ ಆಂಜನೇಯ ದೇವಸ್ಥಾನದಿಂದ ಮೇಗಳಪೇಟೆವರೆಗೆ ಮೆರವಣಿಗೆ ಮಾಡಲಾಯಿತು.
ಮಹಿಳೆಯರು ಒತ್ತು ಸಾಗಿದ ಕುಂಭ ಮತ್ತು ಡೊಳ್ಳು ಕುಣಿತ ಮೆರವಣಿಗೆಗೆ ಮೆರುಗು ನೀಡಿತು. ಮೇಗಳಪೇಟೆಯ ಮುಖ್ಯ ರಸ್ತೆ ಪಕ್ಕದ ಸರ್ಕಲ್ದಲ್ಲಿ ನಿರ್ಮಿಸಿದ್ದ ಕಟ್ಟೆ ಮೇಲೆ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಇದೇ ವೇಳೆ ನೂರಾರು ಜನರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.