ಮೊಳಕಾಲ್ಮೂರು: ಪಟ್ಟಣದ ನಿವಾಸಿಗಳಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಇಲ್ಲಿನ ಹಳೆಕೆರೆ ಗ್ರಾಮದ ಅಡವಿಯಲ್ಲಿ ಮಂಗಳವಾರ ಬೆಳಗಿನ ಜಾವ ಅರಣ್ಯ ಇಲಾಖೆ ಅಧಿಕಾರಿಗಳು ಇರಿಸಿದ್ದ ಬಲೆಯಲ್ಲಿ ಸೆರೆಯಾಗಿದೆ.
ಪಟ್ಟಣಕ್ಕೆ ಹೊಂದಿಕೊಂಡಿರುವ ಬೆಟ್ಟದಲ್ಲಿ ಕಳೆದ ತಿಂಗಳು ಕಾಣಿಸಿಕೊಂಡಿದ್ದ ಮೂರು ಚಿರತೆಗಳ ಪೈಕಿ ಈಗ ಎರಡು ಸೆರೆ ಸಿಕ್ಕಿವೆ. ಇನ್ನೂ ಒಂದು ಉಳಿದುಕೊಂಡಿದ್ದು ಇದರ ಸೆರೆಗೂ ಬಲೆ ಬೀಸಲಾಗಿದೆ. ಸೆರೆ ಸಿಕ್ಕಿರುವ ಚಿರತೆಯನ್ನು ಚಿತ್ರದುರ್ಗದ ಆಡು ಮಲ್ಲೇಶ್ವರ ಕಿರು ಮೃಗಾಲಯಕ್ಕೆ ಕೊಂಡೊಯ್ಯುವುದಾಗಿ ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.