ಕಾರವಾರ:ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಶಾಸಕ ಸತೀಶ ಸೈಕ್ ಹೋರಾಟಕ್ಕೆ ಐಆರ್ ಬಿ ಕಂಪನಿ ಮಣಿದಿದೆ.
ಅಂಕೋಲಾ ಬೇಲೆಕೇರಿ ಟೋಲ್ ಗೇಟ್ ನಲ್ಲಿ ಮಂಗಳವಾರ ಶುಲ್ಕ ವಸೂಲಿ ಬಂದ್ ಮಾಡಲಾಗಿದೆ.
ಕಾರವಾರ-ಬಿಣಗಾ ನಡುವಿನ ಸುರಂಗ ವಾಹನ ಓಡಾಟಕ್ಕೆ ಸುರಕ್ಷಿತವಾಗಿರುವ ಬಗ್ಗೆ ಪ್ರಮಾಣಪತ್ರ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಶಾಸಕ ಸತೀಶ ಸೈಲ್ ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೇಳಿದ್ದರು. ಪ್ರಮಾಣಪತ್ರ ನೀಡದೇ ಇದ್ದಲ್ಲಿ ಸುರಂಗ ಹಾಗೂ ಟೋಲ್ ಶುಲ್ಕ ವಸೂಲಿ ಬಂದ್ ಮಾಡುವಂತೆ ಸೂಚಿಸಿದ್ದರು.
ಇದನ್ನೂ ಓದಿ: ಟೋಲ್ ಶುಲ್ಕ ವಸೂಲಿ ತಕ್ಷಣ ನಿಲ್ಲಿಸಿ
ಆದರೆ, ಚತುಷ್ಪಥ ಗುತ್ತಿಗೆ ಪಡೆದ ಐಆರ್ ಬಿ ಕಂಪನಿ ಸುರಕ್ಷತಾ ಪ್ರಮಾಣಪತ್ರ ಹಾಜರುಪಡಿಸುವಲ್ಲಿ ವಿಫಲವಾಗಿತ್ತು. ಇದೇ ಕಾರಣಕ್ಕಾಗಿ ಕಾರವಾರ-ಬಿಣಗಾ ನಡುವಿನ ಎರಡೂ ಸುರಂಗ ಮಾರ್ಗಗಳಲ್ಲಿ ವಾಹನ ಸಂಚಾರ ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
ಅದರಂತೆ ಸುರಂಗ ಮಾರ್ಗದಲ್ಲಿ ವಾಹನ ಸಂಚಾರ ತಡೆದು ಬೈತಖೋಲ್ ಮಾರ್ಗವಾಗಿ ಸಂಚರಿಸಲು ಅನುವು ಮಾಡಿಕೊಡಲಾಗಿತ್ತು.
ಆದರೆ, ಟೋಲ್ ಶುಲ್ಕ ವಸೂಲಿ ಅಭಾದಿತವಾಗಿತ್ತು. ಈ ಬಗ್ಗೆ ಸಾಕಷ್ಟು, ಪರ, ವಿರೋಧ ಚರ್ಚೆಗಳು ನಡೆದಿದ್ದವು.
ಮಂಗಳವಾರ ಶಾಸಕ ಸತೀಶ ಸೈಲ್ ನೇತೃತ್ವದಲ್ಲಿ ಅಂಕೋಲಾ ಬೇಲೆಕೇರಿ ಟೋಲ್ ಬಳಿ ಪ್ರತಿಭಟನೆ ನಡೆಸಿದ ಬಳಿಕ ಶುಲ್ಕ ವಸೂಲಿಯನ್ನು ಅಧಿಕಾರಿಗಳು ತಾತ್ಕಾಲಿಕವಾಗಿ ಬಂದ್ ಮಾಡಿದ್ದಾರೆ.