ಬೆಂಗಳೂರು: ಕರೊನಾ COVID19 ಸೋಂಕು ಪರಿಸ್ಥಿತಿ ನಿರ್ವಹಣೆ ವಿಚಾರದಲ್ಲಿ ವೃತ್ತಿಯಲ್ಲಿ ಡಾಕ್ಟರ್ಗಳಾಗಿರುವ ಸಚಿವರಲ್ಲಿ ಹುರುಪು ಮೊದಲಿನಿಂದಲೂ ಕಂಡುಬಂದಿತ್ತು. ಕರೊನಾ ನಂತರದ ಬೆಳವಣಿಗೆಗಳನ್ನು ಅವಲೋಕಿಸಿದರೆ, ಕರೊನಾ ಬಾಧೆ ರಾಜ್ಯದಲ್ಲಿ ಕಾಣಿಸಿಕೊಂಡಾಗಿನಿಂದಲೂ ಡಾ.ಸುಧಾಕರ್ ಕ್ರಿಯಾಶೀಲರಾಗಿ ತೊಡಗಿಕೊಂಡಿದ್ದು ಗುಟ್ಟಿನ ವಿಚಾರವೇನಲ್ಲ.
ಆರೋಗ್ಯ ಸಚಿವರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಚುಟುವಟಿಕೆ ನಡೆಸಿದರು. ಇದು ಆರೋಗ್ಯ ಸಚಿವರಿಗೂ ಇರಿಸುಮುರಿಸು ಉಂಟಾಯಿತು. ಜತೆಗೆ ಇವರಿಬ್ಬರೂ ಮಾಧ್ಯಮಗಳಿಗೆ ಪ್ರತ್ಯೇಕವಾಗಿ ಹೇಳಿಕೆ ನೀಡುವಾಗ ಪೈಪೋಟಿ ಏರ್ಪಟ್ಟಂತೆ ಕಾಣಿಸಿತು. ಸಿಎಂ ಮಧ್ಯಪ್ರವೇಶದ ಬಳಿಕ ಶ್ರೀರಾಮುಲು, ನಾವಿಬ್ಬರೂ ಅಣ್ಣ-ತಮ್ಮಂದಿರಂತೆ ಎಂದು ವಿಷಯಕ್ಕೆ ತೇಪೆ ಹಚ್ಚುವ ಕೆಲಸ ಮಾಡಿದ್ದರು.
ಇಷ್ಟರ ನಡುವೆ, ಕೋವಿಡ್-19 ನಿರ್ವಹಣೆ ಜವಾಬ್ದಾರಿ ಪೂರ್ಣ ಪ್ರಮಾಣದಲ್ಲಿ ಡಾ.ಸುಧಾಕರ್ ಹೆಗಲೇರಿತು. ಈ ಮೂಲಕ ಕರೊನಾ ನೆಪದಲ್ಲಿ ಆರೋಗ್ಯ ಇಲಾಖೆಯನ್ನೂ ನಿರ್ವಹಿಸುವ ಪರೋಕ್ಷ ಅವಕಾಶವೂ ಒದಗಿಬಂತು. ಶ್ರೀರಾಮುಲು ಆರೋಗ್ಯ ಸಚಿವರಾಗಿ ಜಿಲ್ಲೆ ಪ್ರವಾಸದ ಹೊಣೆಹೊತ್ತು ರಾಜ್ಯ ಸುತ್ತಲಾರಂಭಿಸಿದರು. ಇದಾಗಿ, ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಮತ್ತು ಡಾ.ಸುಧಾಕರ್ ನಡುವೆ ಪೈಪೋಟಿ ಕಾಣಿಸಿಕೊಂಡಿತ್ತು.
ಈ ಎಲ್ಲ ಬೆಳವಣಿಗೆಳ ನಡುವೆ, ಡಾ.ಸುಧಾಕರ್ ಅವರು ಶನಿವಾರ ಬೆಳಗ್ಗೆ ಮಾಡಿರುವ ಎರಡು ಟ್ವೀಟ್ಗಳು ಎಲ್ಲರ ಗಮನಸೆಳೆದಿವೆ. ಶ್ರೀರಾಮುಲು ಬಳಿಕ ಈಗ ಡಾ.ಸುಧಾಕರ್ ಅವರು ನಾವು ಅಣ್ತಮ್ಮ ಎಂದು ಹೇಳಿ ಸಮಜಾಯಿಷಿ ನೀಡಿ ಅಚ್ಚರಿ ಮೂಡಿಸಿದ್ದಾರೆ.
ನನ್ನ ಮತ್ತು ಆರೋಗ್ಯ ಸಚಿವರಾದ ಶ್ರೀರಾಮುಲು ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕೊರೋನಾ ವಿರುದ್ಧ ಟೊಂಕ ಕಟ್ಟಿ ಹೋರಾಡುತ್ತಿದ್ದೇವೆ. ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದೇವೆ. ನಾನು ಮತ್ತು ಶ್ರೀರಾಮುಲು ಅವರು ಅಣ್ಣ-ತಮ್ಮಂದಿರಂತೆ ಈ ರಾಜ್ಯದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ.
— Dr Sudhakar K (@mla_sudhakar) April 4, 2020