ಬೆಂಗಳೂರು: ಮೇ 2ರಿಂದ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಕರೊನಾ ಕರ್ಫ್ಯೂ ನಿಯಮಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ರಾಜ್ಯ ಸರ್ಕಾರ ಶನಿವಾರ ರಾತ್ರಿ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಕರೊನಾ ಕರ್ಫ್ಯೂ ಹೇರಿದ ನಂತರವೂ ಅಗತ್ಯ ವಸ್ತು ಖರೀದಿಗೆ ಅವಕಾಶ ಮಾಡಿಕೊಟ್ಟಿರುವ ಬೆಳಗ್ಗೆ 6ರಿಂದ 10ರ ಅವಧಿಯಲ್ಲಿ ಮಾರುಕಟ್ಟೆ, ಸಂತೆಗಳಲ್ಲಿ ಅಪರಿಮಿತ ಜನದಟ್ಟಣೆ ಆಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತಷ್ಟು ಹೊಸ ಕ್ರಮ ಕೈಗೊಳ್ಳುವ ಮೂಲಕ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ.
ಸಂತೆ, ವಾರದ ಸಂತೆಗಳನ್ನು ನಿರ್ಬಂಧಿಸಲಾಗಿದೆ. ಇವುಗಳಿಗೆ ಪರ್ಯಾಯವಾಗಿ ಬೆಳಗ್ಗೆ 6ರಿಂದ ಸಂಜೆ 6ವರೆಗೆ ಹಾಪ್ಕಾಮ್ಸ್ಗಳು ಹಾಗೂ ಎಲ್ಲ ರೀತಿಯ ಹಾಲಿನ ಬೂತ್ಗಳು, ತಳ್ಳುವ ಗಾಡಿಗಳಲ್ಲಿ ಹಣ್ಣು ತರಕಾರಿ ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಹಾಗೆಯೇ ಎಪಿಎಂಸಿ ಹಾಗೂ ದಿನಸಿ ಅಂಗಡಿಗಳನ್ನು ತೆರೆಯಲು ಇದ್ದ ಕಾಲಾವಕಾಶವನ್ನು ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ವಿಸ್ತರಿಸಲಾಗಿದೆ. ಈವರೆಗೆ ಬೆಳಗ್ಗೆ 6ರಿಂದ 10 ಗಂಟೆಯವರೆಗಷ್ಟೇ ಅಂಗಡಿಗಳು ಬಾಗಿಲು ತೆರೆಯಬಹುದಾಗಿತ್ತು.
ರಾಜ್ಯದಲ್ಲಿ ಸತತ ಮೂರೂ ದಿನ 200ಕ್ಕೂ ಅಧಿಕ ಕೋವಿಡ್ ಸಾವು!; ಇವತ್ತು ಹೊಸದಾಗಿ ದೃಢಪಟ್ಟ ಸೋಂಕಿನ ಪ್ರಮಾಣ 40,990