ತಿರುವನಂತಪುರಂ: ಕೇರಳದಲ್ಲಿ ನಾನ್ ವೆಜ್ ಹೋಟೆಲ್ಗಳ ಕರ್ಮಕಾಂಡ ದಿನಕ್ಕೊಂದು ಬಯಲಾಗುತ್ತಿದೆ. ಚಿಕನ್ ಶೋರ್ಮಾ ತಿಂದು 16 ವರ್ಷ ಬಾಲಕಿ ಮೃತಪಟ್ಟ ಬಳಿಕವಂತೂ ಕೇರಳದ ಆಹಾರ ಸುರಕ್ಷತಾ ಇಲಾಖೆಯು ಹೋಟೆಲ್ಗಳ ಮೇಲೆ ದಾಳಿ ಮಾಡಿ, ಈಗಾಗಲೇ ಅನೇಕ ಹೋಟೆಲ್ಗಳಿಗೆ ಬೀಗ ಜಡಿದಿದೆ. ಇದರ ನಡುವೆಯೇ ಮತ್ತೊಂದು ದುರಂತ ಪ್ರಕರಣ ಸಂಭವಿದೆ. ಶೋರ್ಮಾ ತಿಂದ ಬಳಿಕ ಫುಡ್ ಪಾಯಿಸನ್ ಆಗಿ 24 ವರ್ಷದ ಯುವಕ ದುರಂತ ಸಾವಿಗೀಡಾಗಿದ್ದಾನೆ.
ಮೃತ ಯುವಕನನ್ನು ರಾಹುಲ್ ಡಿ ನಾಯರ್ ಎಂದು ಗುರುತಿಸಲಾಗಿದೆ. ಈತ ಕೊಟ್ಟಾಯಂ ನಿವಾಸಿ. ಇಂದು (ಅ.25) ಮಧ್ಯಾಹ್ನ 2.55ಕ್ಕೆ ಮೃತಪಟ್ಟನು. ಸೋಂಕಿನಿಂದ ಅಂಗಾಂಗ ವೈಫಲ್ಯಗೊಂಡು ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ. ರಾಹುಲ್ಗೆ ತಜ್ಞ ವೈದ್ಯರಿಂದ ಚಿಕಿತ್ಸೆ ದೊರೆಯುತ್ತಿತ್ತು. ಹೆಲ್ತ್ ಬುಲೆಟಿನ್ ಪ್ರಕಾರ ಫುಡ್ ಪಾಯಿಸನ್ನಿಂದ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದೆ. ಆದರೆ, ತಜ್ಞರ ಪರೀಕ್ಷೆಯ ಫಲಿತಾಂಶದ ನಂತರವೇ ಸಾವಿನ ನಿಖರ ಕಾರಣವನ್ನು ತಿಳಿಯಲು ಸಾಧ್ಯ ಎಂದು ಹೆಲ್ತ್ ಬುಲೆಟಿನ್ ಹೇಳಿದೆ.
ಗಂಭೀರ ಸ್ಥಿತಿಯಲ್ಲಿದ್ದ ರಾಹುಲ್ಗೆ ಶನಿವಾರದಿಂದ ಕಾಕ್ಕನಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಂದಿನಿಂದ ಆತನನ್ನು ವೆಂಟಿಲೇಟರ್ನಲ್ಲಿ ಇಡಲಾಗಿತ್ತು. ಕಿಡ್ನಿ ಫೇಲ್ಯೂರ್ ಆದ ಬೆನ್ನಲ್ಲೇ ರಾಹುಲ್ಗೆ ಹೃದಯಾಘಾತವಾಗಿತ್ತು. ಡಯಾಲಿಸಿಸ್ ಮೂಲಕ ಆತನನ್ನು ಜೀವಂತವಾಗಿ ಇರಿಸಲಾಗಿತ್ತು. ಆದರೆ, ತದನಂತರದಲ್ಲಿ ಸೆಪ್ಟಿಕ್ ಶಾಕ್ನಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಅಂದಹಾಗೆ ರಾಹುಲ್ ಕಾಕ್ಕನಾಡದಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಎಸ್ಎಫ್ಒ ಕಂಪನಿಯಲ್ಲಿ ಗುತ್ತಿಗೆ ನೌಕರನಾಗಿದ್ದ. ಕಳೆದ ಗುರುವಾರ ಕಾಕ್ಕನಾಡದ ಲೇ ಹಯಾತ್ ಹೋಟೆಲ್ನಲ್ಲಿ ಶೋರ್ಮಾ ಆರ್ಡರ್ ಮಾಡಿದ್ದ. ರಾಹುಲ್ ಸ್ನೇಹಿತನೂ ಸಹ ಶೋರ್ಮಾ ಸೇವನೆ ಮಾಡಿದ್ದು, ಆತನಿಗೆ ಯಾವುದೇ ಸಮಸ್ಯೆಯಾಗಿಲ್ಲ. ಆದರೆ, ರಾಹುಲ್ಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಸಿಕೊಳ್ಳಲು ಆರಂಭವಾದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ. ಚಿಕಿತ್ಸೆ ಬಳಿಕ ಮನೆಗೆ ಮರಳಿದ್ದ. ಆದರೆ, ಮತ್ತೆ ಆರೋಗ್ಯದಲ್ಲಿ ಏರುಪೇರು ಉಂಟಾದ್ದರಿಂದ ಭಾನುವಾರ ಬೆಳಗ್ಗೆ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ಚಿಕಿತ್ಸೆ ಫಲಿಸದೇ ಇಂದು ಮಧ್ಯಾಹ್ನ ಮೃತಪಟ್ಟಿದ್ದಾರೆ. ಹೆಲ್ತ್ ಬುಲೆಟಿನ್ ಪ್ರಕಾರ ಶೋರ್ಮಾ ತಿಂದ ಬಳಿಕ ಫುಡ್ ಪಾಯಿಸನ್ ಆಗಿದ್ದು, ಅಂಗಾಂಗಳ ವೈಫಲ್ಯದಿಂದ ರಾಹುಲ್ ಮೃತಪಟ್ಟಿದ್ದಾನೆಂದು ಹೇಳಲಾಗಿದೆ.
ರಾಹುಲ್ ಸಾವಿನ ಬಳಿಕ ಆತನ ಸ್ನೇಹಿತರು ತ್ರಿಕಕ್ಕರ ಪುರಸಭೆಯ ಆರೋಗ್ಯ ಇಲಾಖೆಗೆ ದೂರವಾಣಿ ಮೂಲಕ ದೂರು ನೀಡಿದ್ದು, ಪುರಸಭೆಯ ಆರೋಗ್ಯ ಮೇಲ್ವಿಚಾರಕ ಸಹದೇವನ್ ನೇತೃತ್ವದ ತಂಡ, ರಾಹುಲ್ ಶೋರ್ಮಾ ಖರೀದಿಸಿದ ‘ಲೇ ಹಯಾತ್’ ಮೇಲೆ ದಾಳಿ ಮಾಡಿ ಹೋಟೆಲ್ ಅನ್ನು ಸ್ಥಗಿತಗೊಳಿಸಿತು. ನಾಳೆ ಕಲಮಶ್ಶೇರಿ ವೈದ್ಯಕೀಯ ಕಾಲೇಜಿನಲ್ಲಿ ರಾಹುಲ್, ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಸಾವಿಗೆ ನಿಖರ ಕಾರಣ ಏನೆಂಬುದು ತಿಳಿಯಲಿದೆ. (ಏಜೆನ್ಸೀಸ್)
ಚಿಕನ್ ಶೋರ್ಮಾ ತಿಂದ ಮರುದಿನವೇ ವಿದ್ಯಾರ್ಥಿನಿ ಸಾವು: ಮರಣೋತ್ತರ ವರದಿಯಲ್ಲಿತ್ತು ಸ್ಫೋಟಕ ಸಂಗತಿ
ಫುಡ್ ಪಾರ್ಸೆಲ್ ತೆರೆದ ಗ್ರಾಹಕಿಗೆ ಕಾದಿತ್ತು ಶಾಕ್: ಪರೋಟ ಜತೆಯಿತ್ತು ಭಯ ಹುಟ್ಟಿಸುವ ವಸ್ತು!