ಕಾಸರಗೋಡು: ಚಿಕನ್ ಶೋರ್ಮಾ ತಿಂದ ಬಳಿಕ ಫುಡ್ ಪಾಯಿಸನ್ ಆಗಿ 16 ವರ್ಷದ ವಿದ್ಯಾರ್ಥಿನಿ ಮೃತಪಟ್ಟಿರುವ ಆಘಾತಕಾರಿ ಘಟನೆ ಕೇರಳದ ಚೆರ್ವತ್ತೂರಿನಲ್ಲಿ ನಡೆದಿದೆ. ಇದಲ್ಲದೆ, 14 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ವಿದ್ಯಾರ್ಥಿನಿಯನ್ನು ಕರಿವೆಳ್ಳೂರು ಪೆರಳಂ ನಿವಾಸಿ ದೇವಾನಂದಾ (16) ಎಂದು ಗುರುತಿಸಲಾಗಿದೆ. ಚೆರ್ವತ್ತೂರಿನ ಐಡಿಯಲ್ ಫುಡ್ ಪಾಯಿಂಟ್ನಲ್ಲಿ ವಿದ್ಯಾರ್ಥಿಗಳು ಶನಿವಾರ ಶೋರ್ಮಾ ಸೇವಿಸಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ವಿದ್ಯಾರ್ಥಿಗಳಲ್ಲಿ ವಾಂತಿ, ಭೇದಿ, ಹೊಟ್ಟೆನೋವು ಹಾಗೂ ಜ್ವರ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇತ್ತ ತೀವ್ರ ಅಸ್ವಸ್ಥಳಾಗಿದ್ದ ದೇವಾನಂದಾಳನ್ನು ಭಾನುವಾರ ಬೆಳಗ್ಗೆ ಚೆರ್ವತ್ತೂರಿನ ಆರೋಗ್ಯ ಕೇಂದ್ರಕ್ಕೆ ತರಲಾಗಿತ್ತು. ಆದರೆ, ಆರೋಗ್ಯ ಸುಧಾರಿಸದೇ ಹದಗೆಟ್ಟ ಕಾರಣ ಹೆಚ್ಚಿನ ಚಿಕಿತ್ಸೆಗೆಂದು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ, ಚಿಕಿತ್ಸೆ ಫಲಿಸದೇ ದೇವಾನಂದಾ ಕೊನೆಯುಸಿರೆಳೆದಿದ್ದಾಳೆ. ಉಳಿದ 14 ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ. ಫುಡ್ ಪಾಯಿಸನ್ನಿಂದ ಮೃತಪಟ್ಟಿರುವುದು ಮರಣೋತ್ತರ ವರದಿಯಿಂದ ದೃಢವಾಗಿದೆ.
ಇನ್ನೂ ಈ ಪ್ರಕರಣದಲ್ಲಿ ಇಬ್ಬರ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರು ಮೂಲದ ಅನೆಕ್ಷ್ ಮತ್ತು ಸಂದೇಶ್ ರಾಯ್ ಎಂದು ಗುರುತಿಸಲಾಗಿದೆ. ಆರೋಪಿ ಅನೆಕ್ಷ್ ಘಟನೆ ನಡೆದ ಚೆರವತ್ತೂರಿನ ಐಡಿಯಲ್ ಫುಡ್ಪಾಯಿಂಟ್ನ ಮ್ಯಾನೆಜಿಂಗ್ ಪಾರ್ಟ್ನರ್ ಆಗಿದ್ದಾನೆ. ಮತ್ತೋರ್ವ ಆರೋಪಿ ಸಂದೇಶ ರಾಯ್ ನೇಪಾಳ ಮೂಲದವನಾಗಿದ್ದು, ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು.
ಘಟನೆಯ ಬೆನ್ನಲ್ಲೇ ಆಹಾರ ಸುರಕ್ಷತಾ ಅಧಿಕಾರಿಗಳು ಐಡಿಯಲ್ ಫುಡ್ಪಾಯಿಂಟ್ ಅನ್ನು ಪರಿಶೀಲಿಸಿ, ಉಪಾಹಾರ ಗೃಹವನ್ನು ಸೀಲ್ ಮಾಡಿದ್ದಾರೆ. ಆಹಾರ ಸುರಕ್ಷತಾ ಇಲಾಖೆಯಿಂದ ಪರವಾನಗಿ ಪಡೆಯದೆ ಉಪಾಹಾರ ಗೃಹ ನಡೆಸುತ್ತಿರುವುದು ಕಂಡುಬಂದಿದೆ. ಉಪಾಹಾರ ಗೃಹದಿಂದ ತೆಗೆದ ಆಹಾರದ ಮಾದರಿಗಳನ್ನು ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಲಾಗಿದೆ.
ಆಹಾರ ಸುರಕ್ಷತಾ ಆಯುಕ್ತರಿಗೆ ವರದಿ ಸಲ್ಲಿಸುವಂತೆ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಸೂಚಿಸಿದ್ದು, ಫುಡ್ ಪಾಯಿಸನ್ನಿಂದ ಬಳಲುತ್ತಿರುವವರಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುವಂತೆ ಜಿಲ್ಲಾ ವೈದ್ಯಾಧಿಕಾರಿಗೆ ಸಚಿವೆ ಶಿಫಾರಸು ಮಾಡಿದ್ದಾರೆ. (ಏಜೆನ್ಸೀಸ್)
ಪರೋಟ ತಿಂದ ಮರುದಿನವೇ ಬಾಲಕ ದುರಂತ ಸಾವು: ಮರಣೋತ್ತರ ವರದಿಯಲ್ಲಿತ್ತು ಸ್ಫೋಟಕ ಸಂಗತಿ
ಎಲ್ಲವೂ ಕಾಮನ್… ಲಾಕಪ್ ಶೋನಲ್ಲಿ ಸಿನಿ ಜಗತ್ತಿನ ಕರಾಳ ಮುಖ ಬಯಲು ಮಾಡಿದ ನಟಿ ಕಂಗನಾ ರಣಾವತ್!
ತನಗಿಂತ 28 ವರ್ಷ ಕಿರಿಯ ವಯಸ್ಸಿನ ಮಹಿಳೆಯನ್ನು ವರಿಸಿದ 66ರ ಮಾಜಿ ಕ್ರಿಕೆಟಿಗ!