ಹೈದರಾಬಾದ್: ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಾಮಾನ್ಯವಾಗಿ ನಡೆಸಿದ ಕಾರ್ಯಾಚರಣೆಯೊಂದು 2020ರಲ್ಲಿ ಈವರೆಗೆ ನಡೆದಂತಹ ಅತಿದೊಡ್ಡ ಕಾರ್ಯಾಚರಣೆಯಾಗಿ ತಿರುವು ಪಡೆದಕೊಂಡಿದೆ. ಅಡಿಷನಲ್ ಕಲೆಕ್ಟರ್ ಸೇರಿದಂತೆ ಐವರು ಸರ್ಕಾರಿ ನೌಕರರನ್ನು ಎಸಿಬಿ ಬಂಧಿಸಿದೆ.
ಸೆಪ್ಟೆಂಬರ್ 9ರಂದು ಎಸಿಬಿ ಅಧಿಕಾರಿಗಳು ತೆಲಂಗಾಣದ ವಿವಿಧ ಏರಿಯಾಗಳಲ್ಲಿ ಭ್ರಷ್ಟರ ಬೇಟೆಗೆ ಇಳಿದಿದ್ದರು. ಈ ವೇಳೆ ಸಿಕ್ಕಿಬಿದ್ದ ಮೇದಕ್ ಜಿಲ್ಲೆಯ ಅಡಿಷನಲ್ ಕಲೆಕ್ಟರ್ ಗದ್ದಮ್ ನಾಗೇಶ್, ನರ್ಸಪುರದ ಕಂದಾಯ ವಿಭಾಗೀಯ ಅಧಿಕಾರಿ (ಆರ್ಡಿಒ) ಬಿ ಅರುಣಾ ರೆಡ್ಡಿ, ಚಿಲ್ಪಿಚೆಡ್ ತಹಸೀಲ್ದಾರ್ ಅಬ್ದುಲ್ ಸತ್ತಾರ್, ಸರ್ವೇ ಆ್ಯಂಡ್ ಲ್ಯಾಂಡ್ ರೆಕಾರ್ಡ್ಸ್ನ ಕಿರಿಯ ಸಹಾಯಕ ವಾಸೀಮ್ ಅಹ್ಮದ್ ಮತ್ತು ಖಾಸಗಿ ವ್ಯಕ್ತಿಯಾದ ಕೊಲಾ ಜೀವನ್ ಗೌಡ್ ಎಂಬುವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಜಮೀನುದಾರನೊಬ್ಬನಿಂದ ಸುಮಾರು 1.12 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಎಲ್ಲವೂ ಆರಂಭವಾಗಿದ್ದು, ಸೆರಿಲಿಂಗಂಪಲ್ಲಿ ನಿವಾಸಿ ಕೆ. ಲಿಂಗ ಮೂರ್ತಿ ಎಂಬುವರು ದೂರು ನೀಡಿದ ಬಳಿಕ. ಇವರು ಎಸಿಬಿಯ ಡೆಪ್ಯುಟಿ ಸೂಪರಿಂಟೆಂಡೆಂಟ್ಗೆ 2020ರ ಫೆಬ್ರವರಿಯಲ್ಲಿ ವರದಿಯೊಂದನ್ನು ನೀಡಿದ್ದರು. ಅದರಲ್ಲಿ ಮೇದಕ್ ಜಿಲ್ಲೆಯ ನರ್ಸಾಪುರ್ ಮಂಡಲದ ಚಿಪ್ಪಲತುರ್ತಿ ಬಳಿಯಿರುವ 59/31, 59/40, 58/1, 58/2 ಸರ್ವೇ ನಂಬರಿನ 112.21 ಎಕರೆ ಭೂ-ಮಾರಾಟದ ಅಳತೆ ಒಪ್ಪಂದಕ್ಕೆ ನಾಲ್ವರೊಂದಿಗೆ ಲಿಂಗಮೂರ್ತಿ ಸಹ ಸಹಿ ಹಾಕಿದ್ದರು.
ಇದನ್ನೂ ಓದಿ: Web Exclusive: ಸ್ಮಾರ್ಟ್ ಸಿಟಿಗಳಲ್ಲಿ ಸೈಕಲ್ ಸವಾರಿ; ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ ಡಲ್ಟ್
ಬಳಿಕ ನೋಂದಣಿ ಪ್ರಕ್ರಿಯೆಯ ಭಾಗವಾಗಿ ಆಕ್ಷೇಪಣೆ-ಪ್ರಮಾಣಪತ್ರ (ಎನ್ಒಸಿ)ಕ್ಕಾಗಿ ಸಂಬಂಧಿಸಿದ ದಾಖಲೆಗಳನ್ನು ತಹಸೀಲ್ದಾರ್ ಅಬ್ದುಲ್ ಸತಾರ್ರಿಗೆ ನೀಡಿದ್ದರು. 22-ಎ ನಿಷೇಧಿತ ಗುಣಲಕ್ಷಣಗಳ ಪಟ್ಟಿಯಲ್ಲಿ ಭೂಮಿ ಸೇರುವುದರಿಂದ ಎನ್ಒಸಿ ಅತ್ಯಗತ್ಯವಾಗಿತ್ತು. ಅದೇ ಸಮಯದಲ್ಲಿ ಅರ್ಜಿಯ ಪ್ರತಿಗಳನ್ನು ಮೇದಕ್ ಜಿಲ್ಲೆಯ ಕಲೆಕ್ಟರ್ ಧರ್ಮ ರೆಡ್ಡಿ ಮತ್ತು ಆರ್ಡಿಒ ಅರುಣಾ ರೆಡ್ಡಿಗೆ ಸಲ್ಲಿಸಿದ್ದರು.
ಇಲ್ಲಿಂದಲೇ ಶುರುವಾಗಿದ್ದು ಲಂಚದಾಟ, ಅಡಿಷನಲ್ ಕಲೆಕ್ಟರ್ ಗದ್ದಮ್ ನಾಗೇಶ್ ಅವರು ಎನ್ಒಸಿ ನೀಡಬೇಕಾದರೆ ಎಕರೆಗೆ 1 ಲಕ್ಷ ರೂ.ನಂತೆ 1.12 ಕೋಟಿ ರೂ. ಲಂಚ ನೀಡುವಂತೆ ಒತ್ತಾಯ ಮಾಡಿದ್ದಾರೆ. ಅಲ್ಲದೆ, ಈಗಾಗಲೇ ಎರಡು ಕಂತುಗಳಲ್ಲಿ ಒಂದು ಬಾರಿ 19.5 ಲಕ್ಷ ರೂ. ಹಾಗೂ ಎರಡನೆ ಬಾರಿ 20.5 ಲಕ್ಷ ರೂ. ನಗದನ್ನು ಸ್ವೀಕರಿಸಿದ್ದಾರೆ.
ಇತ್ತ ಜಮೀನುದಾರ ಇನ್ನುಳಿದ 72 ಲಕ್ಷ ರೂ. ಹಣವನ್ನು ನೀಡಲು ವಿಫಲವಾದಾಗ ಲಂಚಬಾಕರು 5 ಎಕರೆ ಜಮೀನು ಬರೆದುಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಒಪ್ಪಿಕೊಂಡು ಜಮೀನನ್ನು ನಾಗೇಶ್ ಸಂಬಂಧಿ ಕೊಲಾ ಜೀವನ್ ಗೌಡ್ ಬೇನಾಮಿ ಹೆಸರಿಗೆ ಮಾಡಿಕೊಟ್ಟಿದ್ದಾರೆ. ಇದಲ್ಲದೆ, ಜಮೀನು ನೋಂದಣಿಗೆ ಶ್ಯುರಿಟಿಯಾಗಿ ಡೆಪ್ಯುಟಿ ಕಲೆಕ್ಟರ್ 8 ಖಾಲಿ ಚೆಕ್ಗಳಿಗೆ ಜಮೀನುದಾರನಿಂದ ಸಹಿ ಮಾಡಿಸಿಕೊಂಡಿದ್ದಾರೆ. ಈ ಲಂಚವಾತಾರ ಇಲ್ಲಿಗೆ ಮುಗಿಯಲಿಲ್ಲ. ಇದರ ಬೆನ್ನಲ್ಲೇ ನಾಗೇಶ್ ಸೂಚನೆ ಮೇರೆಗೆ ಜ್ಯೂನಿಯರ್ ಅಸಿಸ್ಟೆಂಟ್ ವಾಸಿಮ್ ಅಹ್ಮದ್ ಸಹ ಜಮೀನುದಾರನಿಂದ 5 ಲಕ್ಷ ರೂ. ಲಂಚ ಸ್ವೀಕರಿಸಿದ್ದಾನೆ. ಫೈಲ್ ಪೂರ್ಣಗೊಳಿಸಲು ಪ್ರಕ್ರಿಯೆಯ ಭಾಗವಾಗಿ ಲಂಚ ಪಡೆದುಕೊಂಡಿದ್ದಾರೆ.
ಎನ್ಒಸಿ ಪಡೆಯಲು ಮತ್ತು ಭೂಮಿಗೆ ಸಂಬಂಧಿಸಿದ ಆನ್ಲೈನ್ ದಾಖಲೆ ತಿದ್ದುಪಡಿಯನ್ನು ಪೂರ್ಣಗೊಳಿಸಲು ಲಿಂಗ ಮೂರ್ತಿ ಅವರಿಂದ ಲಂಚದ ನೀಡಲು ಒತ್ತಾಯಿಸಿರುವುದು ತನಿಖೆಯಲ್ಲೂ ಬಹಿರಂಗವಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಎಸಿಬಿ ಗದ್ದಮ್ ನಾಗೇಶ್ ನಿವಾಸದ ಮೇಲೆ ದಾಳಿ ಮಾಡಿದಾಗ ಸಹಿಯುಳ್ಳ 8 ಖಾಲಿ ಚೆಕ್ಗಳು ಮತ್ತು ಸೇಲ್ ಅಗ್ರಿಮೆಂಟ್ ಸೇರಿದಂತೆ ಇನ್ನಿತರ ದಾಖಲೆಗಳು ಪತ್ತೆಯಾಗಿವೆ.
ಅರುಣಾ ರೆಡ್ಡಿ ಮನೆ ಮೇಲೆ ದಾಳಿ ಮಾಡಿದಾಗ ಅವರ ಬಳಿ ಲೆಕ್ಕವಿಲ್ಲದ 28 ಲಕ್ಷ ರೂ. ನಗದು ಮತ್ತು ಅರ್ಧ ಕೆ.ಜಿ. ಚಿನ್ನ ಪತ್ತೆಯಾಗಿದೆ. ಸದ್ಯ ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. (ಏಜೆನ್ಸೀಸ್)
VIDEO| ಚಲಿಸುವ ಬಸ್ ಮೇಲೆ ಬಿತ್ತು ರೋಹಿತ್ ಶರ್ಮಾ ಬಾರಿಸಿದ ಸಿಕ್ಸರ್ ಚೆಂಡು..!