ಮಸ್ಕಿ: ಮಸ್ಕಿ ಉಪ ಚುನಾವಣೆ ಅಖಾಡಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂತೆಕೆಲ್ಲೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಶುಕ್ರವಾರ ಚುನಾವಣಾ ಅಖಾಡಕ್ಕೆ ಇಳಿದರು. ಬೆಳಗ್ಗೆ ಮುದಗಲ್ನಿಂದ ಆಗಮಿಸಿದ ಅವರು, ಮಟ್ಟೂರು ಗ್ರಾಮದ ಮೂಲಕ ವಿಧಾನಸಭಾ ಕ್ಷೇತ್ರ ಪ್ರವೇಶಿಸಿದರು. ಸಂತೆಕೆಲ್ಲೂರು, ಅಂಕುಶದೊಡ್ಡಿ ಗ್ರಾಮಗಳಲ್ಲಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಮಧ್ಯಾಹ್ನ ಒಂದಕ್ಕೆ ಮಸ್ಕಿ ಪಟ್ಟಣದ ಗಾಂಧಿನಗರಕ್ಕೆ ಬಂದ ಅವರು, ಮಹಾತ್ಮ ಗಾಂಧಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ತೆರೆದ ವಾಹನ ಏರಿದರು. ನೂರಾರು ಬೈಕ್ಗಳೊಂದಿಗೆ ರ್ಯಾಲಿ ಆರಂಭವಾಗಿ, ಪ್ರಮುಖ ಬೀದಿಗಳಲ್ಲಿ ವಿಜಯೇಂದ್ರರನ್ನು ಮೆರವಣಿಗೆ ಮಾಡಲಾಯಿತು. ಗಾಂಧಿ ನಗರದಲ್ಲಿ ನೂರಾರು ಯುವಕರು ಜೆಸಿಬಿ ಮೂಲಕ ಮುಖ್ಯಮಂತ್ರಿ ಪುತ್ರನಿಗೆ ಹೂವಿನ ಸುರಿಮಳೆ ಸುರಿಸಿದರು. ದಾರಿಯಲ್ಲಿ ಮಹಿಳೆಯರು ಆರತಿ ಬೆಳಗಿ ತಿಲಕ ಇಟ್ಟರು. ಅಗಸಿ, ಮುಖ್ಯ ಬಜಾರ, ದೈವದಕಟ್ಟೆ, ತೇರ ಬೀದಿ, ಕನಕವೃತ್ತ, ವಾಲ್ಮೀಕಿ ವೃತ್ತ, ಬಸವ ವೃತ್ತದ ಮೂಲಕ ಬಸವೇಶ್ವರ ನಗರದ ಬಿಜೆಪಿ ಕಚೇರಿವರೆಗೆ ಮೆರವಣಿಗೆ ನಡೆಯಿತು.
ಕನಕವೃತ್ತದಲ್ಲಿ ವಿಜಯೇಂದ್ರಗೆ ಅಭಿಮಾನಿಗಳು ಜೆಸಿಬಿ ಯಂತ್ರದ ಮೂಲಕ ಬೃಹತ್ ಹೂವಿನ ಹಾರ ಹಾಗೂ ಸೇಬು ಹಣ್ಣಿನ ಹಾರ ಹಾಕಿ ಅಭಿನಂದಿಸಿದರು. ಶಾಸಕ ರಾಜುಗೌಡ, ಡಾ.ಶಿವರಾಜ ಪಾಟೀಲ, ಪರಣ್ಣ ಮುನವಳ್ಳಿ ಮಾಜಿ ಶಾಸಕ ಮಾನಪ್ಪ ವಜ್ಜಲ್, ಮುಖಂಡ ಮಹಾದೇವಪ್ಪಗೌಡ ಪಾಟೀಲ್, ಹಲವು ಮುಖಂಡರು ಭಾಗವಹಿಸಿದ್ದರು.