ಕೊಚ್ಚಿ: ಕರಾವಳಿ ನಿಯಂತ್ರಣಾ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿ ಕೊಚ್ಚಿಯ ಮರಾಡು ಪ್ರದೇಶ ಬಳಿಯಿದ್ದ 4 ಲಕ್ಸುರಿ ವಸತಿ ಕಟ್ಟಡವನ್ನು ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ನಾಲ್ಕು ತಿಂಗಳ ಹಿಂದೆಯೇ ಆದೇಶ ನೀಡಿತ್ತು. ಅದರಂತೆ ಶನಿವಾರ ಎರಡು ಕಟ್ಟಡಗಳನ್ನು ಧ್ವಂಸಗೊಳಿಸಿ, ತೆರುವುಗೊಳಿಸಿದ್ದ ಕೇರಳ ಸರ್ಕಾರ, ಇಂದು ಮತ್ತೆರಡು ಕಟ್ಟಡಗಳನ್ನು ಹೊಡೆದುರುಳಿಸಿದೆ. ವಿಶೇಷವೆಂದರೆ ವಸತಿ ಕಟ್ಟಡಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿ ನಡೆದ ಅತ್ಯಂತ ದೊಡ್ಡ ಕಟ್ಟಡ ನೆಲಸಮ ಕಾರ್ಯಾಚರಣೆ ಇದಾಗಿದೆ.
ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಕಟ್ಟಡ ಉರುಳಿಸುವ ಕೆಲಸವನ್ನು ಕೈಗೆತ್ತಿಕೊಂಡ ಕೇರಳ ಸರ್ಕಾರ, ನಿಯಂತ್ರಿತ ಒಳಸ್ಫೋಟಕಗಳನ್ನು ಬಳಸಿಕೊಂಡು ಬಹು ಎತ್ತರದ ಎಚ್2ಒ ಹೋಲಿ ಫೈತ್ ಅಪಾರ್ಟ್ಮೆಂಟ್ ಅನ್ನು ನೆಲಸಮ ಮಾಡಿತು. ಬಳಿಕ ಕಟ್ಟಡ ಅವಶೇಷಗಳನ್ನು ತೆರವುಗೊಳಿಸಲಾಗಿತ್ತು. ಇಂದು ಬೆಳಗ್ಗೆ ಅದೇ ಸಮಯದಲ್ಲಿ ಮತ್ತೆರಡು ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಒಳಸ್ಫೋಟಕಗಳನ್ನಿಟ್ಟು ಜೈನ್ ಕೊರಲ್ ಕೋವ್ ಕಾಂಪ್ಲೆಕ್ಸ್ ಅನ್ನು ಇಂದು ಧ್ವಂಸ ಮಾಡಲಾಗಿದ್ದು, ತೆರವುಗೊಳಿಸುವ ಕಾರ್ಯ ಆರಂಭವಾಗಿದೆ.
ಪೂರ್ವ ತಯಾರಿ
ಕಟ್ಟಡ ನೆಲಸಮಗೊಳಿಸಲು ಮೊದಲೇ ಸಾಕಷ್ಟು ಪೂರ್ವ ತಯಾರಿಯನ್ನು ಕೇರಳ ಸರ್ಕಾರ ಮಾಡಿಕೊಂಡಿತ್ತು. ಸುಮಾರು 800 ಕೆ.ಜಿ ಸ್ಫೋಟಕಗಳನ್ನು ಕಟ್ಟಡದಲ್ಲಿ ಇಡಲಾಗಿತ್ತು. ಅವಶೇಷಗಳು ಕಟ್ಟಡದ ಆವರಣದ ಒಳಗೆ ಬೀಳುವಂತೆ ಅತ್ಯಂತ ನಿಯಂತ್ರಿತವಾಗಿ ಸ್ಫೋಟಿಸಲಾಯಿತು. ಇನ್ನು ಸ್ಫೋಟದ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದನ್ನು ಸಂಜೆ 4 ಗಂಟೆವರೆಗೆ ನಿಷೇಧಿಸಲಾಗಿದೆ. ಕಟ್ಟಡ ಅವಶೇಷಗಳನ್ನು ಸಾಗಿಸಲು ಸಿದ್ಧತೆ ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಟ್ಟಡ ಸುತ್ತಮುತ್ತ ಇದ್ದ ಇನ್ನಿತರ ವಸತಿ ನಿವಾಸಿಗಳನ್ನು ಮನೆ ಬಿಡುವ ಮುನ್ನ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ನಿನ್ನೆಯೇ ಸೂಚಿಸಲಾಗಿತ್ತು. ಅಲ್ಲದೆ, ಧೂಳು ತುಂಬದಿರಲೆಂದು ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಲು ಹೇಳಲಾಗಿತ್ತು. ಸಮೀಪದ ನಿವಾಸಿಗಳಿಗೆ ಸದ್ಯ ತಾತ್ಕಾಲಿಕ ಶಿಬಿರನ್ನು ನಿರ್ಮಿಸಲಾಗಿದ್ದು, ಎಲ್ಲ ಕೆಲಸ ಮುಗಿದ ಬಳಿಕ ಮತ್ತೆ ಅವರ ಮನೆಗೆ ಸ್ಥಳಾಂತರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಏನು ಹೇಳಿತ್ತು?
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕಟ್ಟಡ ತೆರವಿಗೆ ಸುಪ್ರೀಂಕೊರ್ಟ್ ಆದೇಶ ನೀಡಿತ್ತು. ಕರಾವಳಿ ನಿಯಂತ್ರಣಾ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಮಾರಾಡುವಿನಲ್ಲಿರುವ ಕಟ್ಟಡಗಳನ್ನು ನೆಲಕ್ಕುರುಳಿಸಲು ಕೇರಳ ಸರ್ಕಾರಕ್ಕೆ ಸೂಚನೆ ನೀಡಿತ್ತು. ಇದಕ್ಕಾಗಿ ನ್ಯಾಯಾಲಯ 138 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ಇದಲ್ಲದೆ, ಮನೆ ಕಳೆದುಕೊಂಡವರಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿತ್ತು. (ಏಜೆನ್ಸೀಸ್)
#WATCH Maradu flats demolition: Jain Coral Cove complex demolished through a controlled implosion.2 out of the 4 illegal apartment towers were demolished yesterday, today is the final round of the operation. #Kochi #Kerala pic.twitter.com/mebmdIm1Oa
— ANI (@ANI) January 12, 2020