ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ನಲ್ಲಿನ ಸ್ವಜನಪಕ್ಷಪಾತದ ಬಗ್ಗೆ ಆರೋಪಗಳನ್ನು ಮಾಡಿರುವ ನಟಿ ಕಂಗನಾ ರಣಾವತ್ಗೆ ಕ್ರಿಕೆಟಿಗ ಮನೋಜ್ ತಿವಾರಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸುಶಾಂತ್ ಸಾವಿನ ಹಿಂದಿನ ಸತ್ಯ ಹೊರಬರಬೇಕೆಂದು ಹೇಳಿದ್ದಾರೆ.
ಕಂಗನಾ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವವರ ವಿರುದ್ಧ ಟ್ವಿಟರ್ನಲ್ಲಿ ಕಿಡಿಕಾರಿರುವ ಬಂಗಾಳದ ಬ್ಯಾಟ್ಸ್ಮನ್ ಮನೋಜ್ ತಿವಾರಿ, ಅವರೆಲ್ಲರೂ ತಮ್ಮ ಬಣ್ಣವನ್ನು ತಾವೇ ಬಯಲು ಮಾಡುತ್ತಿದ್ದಾರೆ ಎಂದಿದ್ದಾರೆ. ‘ಕಂಗನಾ ರಣಾವತ್ ಮೇಲೆ ದಾಳಿ ಮಾಡುತ್ತಿರುವವರು ತಮ್ಮ ಬಣ್ಣವನ್ನು ತಾವೇ ಬಯಲು ಮಾಡುತ್ತಿದ್ದಾರೆ. ಆದರೆ ಕರ್ಮ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ನಿಮಗೆ ನಿಜಕ್ಕೂ ಅರ್ಹವಾದುದು ಏನೋ, ಅದು ಸಿಕ್ಕೇ ಸಿಗುತ್ತದೆ. ಸುಶಾಂತ್ ಸಾವಿನ ಹಿಂದಿನ ಸತ್ಯ ತಿಳಿಯಬೇಕು’ ಎಂದು 34 ವರ್ಷದ ಮನೋಜ್ ತಿವಾರಿ ಟ್ವೀಟಿಸಿದ್ದಾರೆ. ಅವರು ಭಾರತ ಪರ 12 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಇದನ್ನೂ ಓದಿ: ಕೊನೆಗೂ ಕಂಗನಾಗೆ ಸಮನ್ಸ್ ಕೊಟ್ಟ ಮುಂಬೈ ಪೊಲೀಸ್
ಮನೋಜ್ ತಿವಾರಿ ಅವರು ಇಂಡಿಯಾ ವಾಂಟ್ ಸುಶಾಂತ್ ಟ್ರುತ್ ಎಂಬ ಹ್ಯಾಷ್ಟ್ಯಾಗ್ ಕೂಡ ಬಳಸುತ್ತಿದ್ದು, ಸ್ವಜನಪಕ್ಷಪಾತದ ಬಗೆಗಿನ ಚರ್ಚೆಯ ನಡುವೆ ಸುಶಾಂತ್ ಸಾವಿನ ಹಿಂದಿನ ಸತ್ಯ ಮರೆಯಾಗಬಾರದು ಎಂದೂ ಮತ್ತೊಂದು ಟ್ವೀಟ್ನಲ್ಲಿ ಹೇಳಿದ್ದಾರೆ. ಕಂಗನಾ ಮತ್ತು ಇತರರ ನಡುವಿನ ಕಾದಾಟ ಮುಂದುವರಿಯಬಹುದು. ಆದರೆ ಸದ್ಯದ ವಿಷಯದ ಮೇಲಿನ ಗಮನ ಬೇರೆಡೆಗೆ ಹೋಗುವುದು ಬೇಡ. ಕಂಗನಾಗೆ ಬೆಂಬಲ ನೀಡುವುದು ಸಾಧ್ಯವಾಗದೆ ಇದ್ದರೆ ಬಾಯಿ ಮುಚ್ಚಿಕೊಂಡಿರಿ ಎಂದು ಮನೋಜ್ ತಿವಾರಿ ಹೇಳಿದ್ದಾರೆ.
ಇದಲ್ಲದೆ ಡಿಜಿಟಲ್ ಮಾಧ್ಯಮದ ಮೂಲಕ ಪ್ರತಿಭಟನೆ ನಡೆಸುತ್ತಿರುವ ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಮನೋಜ್ ತಿವಾರಿ, ಕೇವಲ 5 ಗಂಟೆಗಳಲ್ಲಿ 1.11 ದಶಲಕ್ಷ ಟ್ವೀಟ್ಗಳು ಬಂದಿರುವುದು ಅವರು ಎಷ್ಟು ಪ್ರೀತಿಸಲ್ಪಡುತ್ತಿದ್ದರು ಎಂಬುದನ್ನು ತೋರಿಸುತ್ತಿದೆ ಎಂದಿದ್ದಾರೆ.