ಲಖನೌ: ತನ್ನನ್ನು ಮದುವೆಯಾಗಲು ನಿರಾಕರಿಸಿದಳು ಎಂಬ ಕಾರಣಕ್ಕೆ ದುರುಳನೋರ್ವ ಯುವತಿಯ ಮುಖದ ಮೇಲೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿರುವ ಘಟನೆ ಉತ್ತರಪ್ರದೇಶದ ಅಯೋಧ್ಯೆಯ ಹೈದರ್ಗಂಜ್ ಎಂಬ ಪ್ರದೇಶದಲ್ಲಿ ನಡೆದಿದೆ.
ಆ್ಯಸಿಡ್ ದಾಳಿಗೊಳಗಾದ 20 ವರ್ಷದ ಯುವತಿ ಸ್ಥಿತಿ ಗಂಭೀರವಾಗಿದ್ದು, ಆಕೆಯನ್ನು ಲಖನೌನಲ್ಲಿರುವ ಟ್ರಾಮಾ ಸೆಂಟರ್ನಲ್ಲಿ ದಾಖಲಿಸಲಾಗಿದೆ. ಆರೋಪಿ ರಾಜ್ಕರಣ್ ಶರ್ಮಾ(25)ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಯೋಧ್ಯೆ ರೇಂಜ್ ಇನ್ಸ್ಪೆಕ್ಟರ್ ಜನರಲ್ ಪ್ರವೀಣ್ ಕುಮಾರ್ ಆರೋಪಿ ಯುವಕ ಹಾಗೂ ಗಾಯಾಳು ಯುವತಿ ಕುಟುಂಬಗಳು ಇನಾಯತ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದವು. ರಾಜ್ಕಿರಣ್ ಹಾಗೂ ಯುವತಿಗೆ ಮದುವೆ ನಿಶ್ವಯ ಮಾಡಲಾಗಿತ್ತಾದರೂ ಕಾರಣಾಂತರತಗಳಿಂದ ಮುರಿದು ಬಿದ್ದಿತ್ತು.
ಇದನ್ನೂ ಓದಿ: ಬಿಜೆಪಿ ಶಾಸಕನ ಹೆಸರಿನಲ್ಲಿ ನಕಲಿ ಖಾತೆ ಸೃಜಿಸಿ ಮಹಿಳೆಯರಿಗೆ ಮೆಸೇಜ್; ಆರೋಪಿ ಸೆರೆ
ಇದರಿಂದ ತೀವ್ರವಾಗಿ ಕುಪಿತಗೊಂಡಿದ್ದ ಆರೋಪಿಯು ಸೋಮವಾರ ತಡರಾತ್ರಿ ಯುವತಿಯ ಮನೆಗೆ ನುಗ್ಗಿ ಎಲ್ಲರೂ ಗಾಢನಿದ್ರೆಯಲ್ಲಿರುವಾಗ ಆಕೆಯ ಮುಖದ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ. ವಿಚಾರ ತಿಳಿದು ಕಾರ್ಯಪ್ರವೃತ್ತರಾದ ಅಧಿಕಾರಿಗಳ ತಂಡ ಆರೋಪಿಯನ್ನು ಘಟನೆ ನಡೆದ 24 ಘಂಟೆಯೊಳಗೆ ಬಂಧಿಸಿದ್ದಾರೆ.
ಯುವತಿ ಸ್ಥಿತಿ ಗಂಭಿರವಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿಯನ್ನು ಮುಂದಿನ ಎರಡ್ಮೂರು ದಿನಗಳಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು. 15-20 ದಿನದೊಳಗೆ ಆರೋಪಿಗೆ ಶಿಕ್ಷೆಯಾಗಲಿದೆ ಎಂದು ಅಯೋಧ್ಯೆ ರೇಂಜ್ ಇನ್ಸ್ಪೆಕ್ಟರ್ ಜನರಲ್ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.