ನವದೆಹಲಿ : ವ್ಯಕ್ತಿಯೊಬ್ಬರು ಸುಮಾರು ಹನ್ನೆರಡು ವರ್ಷಗಳಿಂದ ತಮ್ಮ ಬಳಿ ಕೆಲಸ ಮಾಡುತ್ತಿದ್ದ ಚಾಲಕನನ್ನು ಹಣದ ವಿಚಾರದಲ್ಲಿ ನಂಬಿ ಕೆಟ್ಟ ಪ್ರಸಂಗವೊಂದು ದೆಹಲಿಯಲ್ಲಿ ನಡೆದಿದೆ. ಮಾಲೀಕರು ಕಾರಿನಲ್ಲಿಟ್ಟಿದ್ದ 80 ಲಕ್ಷ ರೂ.ಗಳನ್ನು ಎತ್ತಿಕೊಂಡು ಪರಾರಿಯಾಗಿದ್ದ ಆ ಚಾಲಕನನ್ನು ದೆಹಲಿ ಪೊಲೀಸರು ಬೆನ್ನು ಹತ್ತಿ ಬಂಧಿಸಿದ್ದಾರೆ. ಪಂಜಾಬ್ನ ಲೂಧಿಯಾನದ ನಿವಾಸಿ, 40 ವರ್ಷದ ಕಿಂದರ್ ಪಾಲ್ ಸಿಂಗ್ ಎಂಬುವನೇ ಬಂಧಿತ ಆರೋಪಿ.
ದೂರುದಾರರಾದ ಲೂಧಿಯಾನದ ಅಜಯ್ ಗುಪ್ತ ಅವರ ಬಳಿ ಆರೋಪಿ ಕಿಂದರ್ 10-12 ವರ್ಷಗಳಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಜುಲೈ 16 ರಂದು ಅವರು ಕಾರಿನಲ್ಲಿ ನವದೆಹಲಿಯ ದಕ್ಷಿಣ ಭಾಗದಲ್ಲಿರುವ ಸೈನಿಕ್ ಫಾರ್ಮ್ಸ್ಗೆ ಹೋದರು. ಹತ್ತಿರದಲ್ಲೇ ಇದ್ದ ನಿವೇಶನವೊಂದನ್ನು ಖರೀದಿಸಲು ಅಡ್ವಾನ್ಸ್ ನೀಡಲು 80 ಲಕ್ಷ ರೂ.ಗಳನ್ನು ಕಾರಿನಲ್ಲಿ ತಂದಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಫಾಲ್ಸ್ ನೋಡಲು ಬಂದ ಪ್ರವಾಸಿಗರಿಂದ ನಡು ರಸ್ತೆಯಲ್ಲೇ ಮೋಜು ಮಸ್ತಿ! ಮಳೆಯಲ್ಲೇ ಡ್ಯಾನ್ಸ್…
ರಿಯಲ್ ಎಸ್ಟೇಟ್ ಡೀಲರ್ ಒಬ್ಬರ ಕಛೇರಿ ಬಳಿ ಕಾರು ನಿಲ್ಲಿಸಿದ ಮೇಲೆ ಗುಪ್ತ ಅವರು, ಚಾಲಕ ಕಿಂದರ್ಗೆ ಕಾರಿನಲ್ಲಿ ಹಣ ಇಟ್ಟಿರುವುದರಿಂದ, ಕಾರು ಬಿಟ್ಟು ಎಲ್ಲಿಯೂ ಹೋಗದಂತೆ ಸೂಚಿಸಿದರು. ನಂತರ ಡೀಲರ್ನೊಂದಿಗೆ ನಿವೇಶನಗಳನ್ನು ನೋಡಲು ಸಾಕೇತ್ ಮತ್ತು ಮೆಹ್ರೌಲಿ ಪ್ರದೇಶಗಳಿಗೆ ಹೋದರು. ಮಧ್ಯಾಹ್ನ ಸುಮಾರು 3.30 ರ ಹೊತ್ತಿಗೆ ವಾಪಸ್ ಬಂದಾಗ, ಕಾರಿನಿಂದ ಹಣ ಮಾಯವಾಗಿತ್ತು. ಜೊತೆಗೆ ಚಾಲಕ ಕಿಂದರ್ ಸಹ ಇರಲಿಲ್ಲ ಎನ್ನಲಾಗಿದೆ.
ತನಿಖೆ ಕೈಗೊಂಡ ಪೊಲೀಸರು ಆ ಸ್ಥಳದ ಸಿಸಿಟಿವಿ ಫೂಟೇಜ್ಗಳನ್ನು ಪರಿಶೀಲಿಸಿದಾಗ, ಚಾಲಕನೇ ಹಣ ಕದ್ದು ಬಿಳಿಯ ಪಂಜಾಬ್ ಇನ್ನೋವ ಕಾರೊಂದರಲ್ಲಿ ಪಲಾಯನ ಮಾಡಿರುವುದು ತಿಳಿದುಬಂತು. ಆತನ ಮನೆಯ ಮೇಲೆ ದಾಳಿ ನಡೆಸಿದಾಗ ಆತ ಸಿಗಲಿಲ್ಲ. ಆದರೆ ಲೂಧಿಯಾನದಲ್ಲಿ ತನ್ನ ಸೋದರಿಯ ಮನೆಯಲ್ಲಿ ಆತ ಸಿಕ್ಕಿದ. ಅವನಿಂದ ಪೂರ್ಣ 80 ಲಕ್ಷ ರೂ. ಹಣ ಮತ್ತು ಕೃತ್ಯಕ್ಕೆ ಬಳಸಿದ್ದ ವಾಹನವನ್ನು ಜಪ್ತಿಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಅತುಲ್ ಕುಮಾರ್ ಠಾಕುರ್ ಹೇಳಿದ್ದಾರೆ. (ಏಜೆನ್ಸೀಸ್)