ಭೋಪಾಲ್: ದುರುಳನೊಬ್ಬ ತನ್ನ ಅತ್ತಿಗೆಗೆ ಬೆಂಕಿ ಇಟ್ಟು ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ರಾಟ್ಲಮ್ ಜಿಲ್ಲೆಯಲ್ಲಿ ನಡೆದಿದೆ. ಮೃತಳನ್ನು ನಿರ್ಮಲಾ ಎಂದು ಗುರುತಿಸಲಾಗಿದೆ. ಆಕೆಯ ಗಂಡ ಪ್ರಕಾಶ್ 6 ತಿಂಗಳ ಹಿಂದಷ್ಟೇ ಆತ್ಮಹತ್ಯೆಗೆ ಶರಣಾಗಿದ್ದ.
ಗಂಡ ಸಾವಿಗೀಡಾದ ಬಳಿಕ ನಿರ್ಮಲಾ ಮೇಲೆ ಭಾವನಿಂದಲೇ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನಡೆದಿದ್ದು, ಇದೀಗ ಬೆಂಕಿ ಹಚ್ಚಿ ಕೊಂದೇ ಬಿಟ್ಟಿದ್ದಾನೆ. ಮೃತ ಪ್ರಕಾಶನ ಹಿರಿಯ ಸಹೋದರ ಸುರೇಶ್ ಈ ದುಷ್ಕೃತ್ಯ ಎಸಗಿದ್ದಾನೆ. ಸಹೋದರ ಪ್ರಕಾಶ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಮಲಾಳೇ ಕಾರಣ ಎಂದು ಆರೋಪಿಸಿ, ಕೊನೆಗೆ ಆಕೆಯ ಪ್ರಾಣವನ್ನೇ ತೆಗೆದಿದ್ದಾನೆ.
ಗಂಡ ಸತ್ತ ನಂತರವೂ ನಿರ್ಮಲಾ ತನ್ನ ಇಬ್ಬರು ಮಕ್ಕಳೊಂದಿಗೆ ಗಂಡನ ಮನೆಯಲ್ಲೇ ನೆಲೆಸಿದ್ದಳು. ಸಹೋದರ ಸಾವಿನ ಬಳಿಕ ನಿರ್ಮಲಾ ಮೇಲೆ ದ್ವೇಷ ಕಾರುತ್ತಿದ್ದ ಸುರೇಶ್, ಡಿಸೆಂಬರ್ 23ರ ಶನಿವಾರ ಸಂಜೆ ಕೊಲೆ ಮಾಡಿದ್ದಾನೆ. ಬೇಕಂತಲೇ ನಿರ್ಮಲಾ ಜತೆ ಕ್ಯಾತೆ ತೆಗೆದ ಸುರೇಶ್, ಆಕೆಯನ್ನು ಧರಧರನೇ ಮನೆಯಿಂದ ಹೊರಗೆಳೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಿರ್ಮಲಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕೊಲೆ ಮಾಡಿದ ಬಳಿಕ ನಿರ್ಮಲಾ ಸಹೋದರನಿಗೆ ಆರೋಪಿ ಸುರೇಶ್ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ನಿರ್ಮಲಾ ಸಹೋದರ ಮಾಧ್ಯಮದವರಿಗೆ ಕರೆ ಮಾಡಿ ತನ್ನ ಸಹೋದರಿಯ ಜೀವ ಅಪಾಯದಲ್ಲಿದೆ ಎಂದು ಹೇಳಿದ್ದಾನೆ. ಆದರೆ, ಸಹೋದರಿಯನ್ನು ಅಷ್ಟೊಂದು ಭೀಕರವಾಗಿ ಕೊಲೆ ಮಾಡುತ್ತಾನೆ ಎಂದು ಆತ ಊಹಿಸಿರಲಿಲ್ಲ.
ಗಂಡನ ಸಾವಿನ ಬಳಿಕ ನಿರ್ಮಲಾ ತುಂಬಾ ಚಿತ್ರಹಿಂಸೆಗೆ ಒಳಗಾಗಿದ್ದಳು. ಈ ಬಗ್ಗೆ ಕುಟುಂಬಕ್ಕೂ ಸಹ ಮಾಹಿತಿ ನೀಡಿದ್ದಳು. ಆದರೆ, ಕುಟುಂಬದ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಸುರೇಶ್ ನಿರಂತರವಾಗಿ ಕಿರುಕುಳ ನೀಡುತ್ತಿರುವುದನ್ನು ತಿಳಿದು ಆಕೆಯನ್ನು ಮನೆಗೆ ಕರೆತರಲು ಸಹೋದರ ಯೋಚನೆ ಮಾಡಿದ್ದ. ಶನಿವಾರ ಸಂಜೆ ನಿರ್ಮಲಾಳನ್ನು ಕರೆದುಕೊಂಡು ಹೋಗಲು ಮುಂದಾದಾಗ ಸುರೇಶನ ಕರೆ ಬಂತು ಎಂದು ಸಹೋದರ ಹೇಳಿದ್ದಾನೆ. ಕೊಲೆ ಮಾಡಿದ ನಂತರ ನಿರ್ಮಲಾ ಸಹೋದರನಿಗೆ ಸುರೇಶ್ ಕರೆ ಮಾಡಿದ್ದಾನೆಂದು ತಿಳಿದುಬಂದಿದೆ.
ಮಧ್ಯಪ್ರದೇಶದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)
ಕುಸ್ತಿ ಒಕ್ಕೂಟ ನಡೆಸಲು ತಾತ್ಕಾಲಿಕ ಸಮಿತಿ ರಚಿಸುವಂತೆ IOAಗೆ ಕ್ರೀಡಾ ಸಚಿವಾಲಯ ಸೂಚನೆ
ಪರೋಟ ತಿಂದ ಮರುದಿನವೇ ಯುವಕ ದುರ್ಮರಣ! ಮರಣೋತ್ತರ ವರದಿಯಲ್ಲಿತ್ತು ಭಯಾನಕ ಸಂಗತಿ
ತೈಲ ಆಮದಿಗೆ ಡಾಲರ್ನ್ನೇ ನೆಚ್ಚಿಕೊಂಡ ಪೂರೈಕೆದಾರರು; ಕಾರಣವೇನು ಗೊತ್ತಾ?