More

    ಪರೋಟ ತಿಂದ ಮರುದಿನವೇ ಯುವಕ ದುರ್ಮರಣ! ಮರಣೋತ್ತರ ವರದಿಯಲ್ಲಿತ್ತು ಭಯಾನಕ ಸಂಗತಿ

    ಕೊಯಮತ್ತೂರು: ಪರೋಟ ಊಟ ಕೆಲ ಆಹಾರ ಪ್ರಿಯರ ನೆಚ್ಚಿನ ಆಯ್ಕೆಗಳಲ್ಲಿ ಒಂದಾಗಿದೆ. ಆದರೆ, ಅದೇ ಪರೋಟ ಈ ಸ್ಟೋರಿಯಲ್ಲಿ ಯುವಕನ ಪಾಲಿಗೆ ವಿಲ್ಲನ್​ ಆಗಿದ್ದು, ಆತನ ಪ್ರಾಣವನ್ನೇ ಕಸಿದಿದೆ. ಪರೋಟ ತಿಂದ ಬೆನ್ನಲ್ಲೇ ಅಲರ್ಜಿಯ ರಿಯಾಕ್ಸನ್​ನಿಂದ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

    ಮೃತ ಯುವಕನನ್ನು ಹೇಮಚಂದ್ರನ್​ (19) ಎಂದು ಗುರುತಿಸಲಾಗಿದೆ. ಈತ ತಿರ್ಪ್ಪೂರ್​ ಜಿಲ್ಲೆಯ ಕನಕಂಪಾಳ್ಯಂ ಪಟ್ಟಣದ ಕರುವಾಯುರಪ್ಪನ್​ ನಗರದ ನಿವಾಸಿ ರಾಮಸಾಮಿ ಎಂಬುವರ ಪುತ್ರ. ಸುಲೂರು ಬಳಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಟೆಕ್​ ವಿದ್ಯಾರ್ಥಿಯಾಗಿದ್ದ. ಕನಕಂಪಾಳ್ಯಂ ಪಟ್ಟಣದ ಬಾಡಿಗೆ ಮನೆಯಲ್ಲಿ ಸ್ನೇಹಿತರ ಜತೆ ವಾಸವಿದ್ದ. ಬುಧವಾರ ರಾತ್ರಿ ಹೇಮಚಂದ್ರನ್​ ಮತ್ತು ಆತನ ಸ್ನೇಹಿತರು ಊಟಕ್ಕೆಂದು ಪರೋಟ ತಂದು ಸೇವಿಸಿದ್ದರು. ಗುರುವಾರ ಬೆಳಗ್ಗೆ ಹೇಮಚಂದ್ರನ್​ ಎಚ್ಚರಗೊಂಡಾಗ ಉಸಿರಾಡಲು ತೊಂದರೆಯಾಗುತ್ತಿದೆ ಅಂತಾ ಹೇಳಿದ್ದಾನೆ. ಇದಾದ ಕೆಲವೇ ಸಮಯದಲ್ಲಿ ಆತ ಕುಸಿದುಬಿದ್ದಿದ್ದಾರೆ. ತಕ್ಷಣ ಆತನನ್ನು ಸ್ನೇಹಿತರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

    ಪ್ರಕರಣ ದಾಖಲಿಸಿಕೊಂಡ ಸುಲೂರು ಪೊಲೀಸರು ಹೇಮಚಂದ್ರನ್​ ದೇಹವನ್ನು ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆ (ಸಿಎಂಸಿಎಚ್​)ಗೆ ಮರಣೋತ್ತರ ಪರೀಕ್ಷೆಗೆಂದು ರವಾನಿಸಿದ್ದಾರೆ. ಆರು ತಿಂಗಳ ಹಿಂದೆಯೂ ರಾತ್ರಿ ಪರೋಟ ತಿಂದಾಗ ಹೇಮಚಂದ್ರನ್​ ಉಸಿರಾಟದ ತೊಂದರೆ ಅನುಭವಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಹೇಮಚಂದ್ರನ್​ ಅವರ ಪಾಲಕರು ಮೃತದೇಹದ ಹೆಬ್ಬೆರಳಿನಲ್ಲಿ ಗಾಯದ ಗುರುತನ್ನು ಕಂಡು ಅನುಮಾನ ವ್ಯಕ್ತಪಡಿಸಿದರು. ಆದರೆ, ಆ ಗಾಯ ಸ್ನೇಹಿತರು ಬೈಕ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಸಂಭವಿಸಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

    ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಷನ್​ 174 ಸಿಆರ್​ಪಿಸಿ (ಸ್ವಾಭಾವಿಕ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯ ನಂತರ ಪೊಲೀಸರು ಮಾಹಿತಿ ನೀಡಿದ್ದು, ಮರಣೋತ್ತರ ವರದಿ ನಡೆಸಿದ ಸಿಎಂಸಿಎಚ್​ ವೈದ್ಯರೊಬ್ಬರ ಪ್ರಕಾರ, ಪರೋಟ ಸೇವನೆ ಸಾವಿಗೆ ಕಾರಣವಾಗಿದೆ ಎಂದಿದ್ದಾರೆ. ಶ್ವಾಸಕೋಸದ ಒಳಗೆ ಮೈದಾ ಅಂಶಗಳು ಪತ್ತೆಯಾಗಿದ್ದು, ಇದರಿಂದ ಉಸಿರಾಟದ ತೊಂದರೆ ಉಂಟಾಗಿ ಜೀವ ಹೋಗಿದೆ ಎಂದಿದ್ದಾರೆ. ಮರಣೋತ್ತರ ವರದಿಗೆ ಕಾಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದು, ಇನ್ನೂ ಮೂರ್ನಾಲ್ಕು ದಿನಗಳಲ್ಲಿ ವರದಿ ಸಿಗಬಹುದು, ಆ ಬಳಿಕ ಸಾವಿಗೆ ನಿಖರ ಕಾರಣ ತಿಳಿಯುತ್ತದೆ ಎಂದಿದ್ದಾರೆ.

    ನಗರದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಒಬ್ಬರು ಹೇಮಚಂದ್ರನ್​ ಸಾವಿಗೆ ಸಂಭವನೀಯ ಕಾರಣಗಳನ್ನು ವಿವರಿಸಿದ್ದಾರೆ. ಅನ್ನನಾಳದ ಮೂಲಕ ಹೊಟ್ಟೆಯೊಳಗೆ ಹಾದುಹೋಗುವ ಆಹಾರ ಕಣಗಳು ಶ್ವಾಸನಾಳಕ್ಕೆ ಮರಳುವ ಸಾಧ್ಯತೆ ಕಡಿಮೆ. ಬಹಳ ಅಪರೂಪವಾಗಿ, ಆಹಾರ ಸೇವನೆಯ ಸಮಯದಲ್ಲಿ ಬಿಕ್ಕಳಿಕೆಗಳಂತಹ ಅಡಚಣೆ ಉಂಟಾದರೆ ಆಹಾರವು ಉಸಿರಾಟದ ಪ್ರದೇಶವನ್ನು ಪ್ರವೇಶಿಸಬಹುದು. ಇದು ಉಸಿರಾಟದ ಮೇಲೆ ಪರಿಣಾಮ ಬೀರುತ್ತದೆ. ಕೆಲವರಿಗೆ ಕೆಲವು ಆಹಾರ ಪದಾರ್ಥಗಳಿಂದ ಅಲರ್ಜಿ ಉಂಟಾಗಬಹುದು, ಆದರೆ ಇದು ಸಾವಿಗೆ ಕಾರಣವಾಗಬಹುದೇ ಎಂಬುದು ತಿಳಿದಿಲ್ಲ. ಸಾವಿಗೆ ಇತರೇ ಕಾರಣಗಳು ಸಹ ಇರಬಹುದು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಾತ್ರ ಇದು ಬಹಿರಂಗವಾಗಲಿದೆ ಎಂದು ಹೇಳಿದರು. (ಏಜೆನ್ಸೀಸ್​)

    ವಿದ್ಯಾರ್ಥಿಯ ಜತೆ 30ರ ಶಿಕ್ಷಕಿ ಕೊಯಮತ್ತೂರಿಗೆ ಎಸ್ಕೇಪ್! ಅಪ್ರಾಪ್ತನ ಹೇಳಿಕೆ ಕೇಳಿ ಪೊಲೀಸರೇ ಶಾಕ್​

    ಏನು ಆಗಲ್ಲ ಅನ್ನೋ ನಂಬಿಕೆ….ಆಸೆಪಟ್ಟು ಪರೋಟ ತಿಂದ ಪಿಯು ವಿದ್ಯಾರ್ಥಿನಿಯ ಬದುಕು ದುರಂತ ಅಂತ್ಯ

    ಪರೋಟ ತಿಂದ ಮರುದಿನವೇ ಬಾಲಕ ದುರಂತ ಸಾವು: ಮರಣೋತ್ತರ ವರದಿಯಲ್ಲಿತ್ತು ಸ್ಫೋಟಕ ಸಂಗತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts