ಮುಂಬೈ: ಆಟೋರಿಕ್ಷಾ ಚಾಲಕನೋರ್ವ 13 ವರ್ಷದ ಬಾಲಕನನ್ನು ಇರಿದು ಕೊಲೆ ಮಾಡಿ, ಶಿರಚ್ಛೇದ ಮಾಡಿ ಶವವನ್ನು ಮಾಲ್ವಾನಿ ಪ್ರದೇಶದ ಕಾಡಿನಲ್ಲಿ ಎಸೆದಿದ್ದಾನೆ.
ಮೃತಪಟ್ಟ ಬಾಲಕನನ್ನು ಒಂಬತ್ತನೇ ತರಗತಿಯ ವಿದ್ಯಾರ್ಥಿ ವಿದಾನಂದ ಯಾದವ್ ಎಂದೂ ಹಾಗೂ ಆರೋಪಿಯನ್ನು ಕರಣ್ ಬಹದ್ದೂರ್ ಎಂದೂ ಗುರುತಿಸಲಾಗಿದೆ.
ಇದನ್ನು ಓದಿ: ಕಳುವು ಮಾಡಿದನೆಂದು ಸಂಶಯಿಸಿ ಸಾಯುವಂತೆ ಥಳಿಸಿದ
ಬಾಲಕ ಶಿರಚ್ಛೇದ ಮಾಡುವಂಥ ತಪ್ಪೇನು ಮಾಡಿದ್ದ?: ಪೊಲೀಸರು ವಿಚಾರಣೆ ನಡೆಸಿದಾಗ ತಿಳಿದು ಬಂದದ್ದು ಇದು- ಮೃತ ಬಾಲಕ ಮತ್ತು ಅವರ ತಾಯಿ ತಮ್ಮ ಮನೆಯ ಎದುರು ವಾಸಿಸುವ ಕರಣ್ ಬಹದ್ದೂರ್ ಎಂಬಾತನೊಂದಿಗೆ ವಾಗ್ವಾದ ನಡೆಸಿದ್ದಾರೆ. ಮಳೆನೀರು ತನ್ನ ಮನೆಗೆ ಪ್ರವೇಶಿಸದಂತೆ ತಡೆಯಲು ಬಹದ್ದೂರ್ ಸಣ್ಣ ಸಿಮೆಂಟ್ ಗೋಡೆಯನ್ನು ನಿರ್ಮಿಸಿದ್ದ. ಈ ಬಾಲಕ ಆ ಗಡಿಯನ್ನು ಮುರಿದಿದ್ದಾನೆ. ಜಗಳಕ್ಕೆ ಕಾರಣವಾದದ್ದು ಇದಿಷ್ಟೇ.
ಆರೋಪಿ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ ಜಾಲಿ ಡ್ರೈವ್ ನೆಪದಲ್ಲಿ ಬಾಲಕನನ್ನು ತನ್ನ ಆಟೋರಿಕ್ಷಾದಲ್ಲಿ ಕರೆದೊಯ್ದು ಇರಿದು ಕೊಂದು ನಂತರ ಶಿರಚ್ಛೇದ ಮಾಡಿದ್ದಾನೆ.
ಶುಕ್ರವಾರ ರಾತ್ರಿ ಕೊಳೆತ ಸ್ಥಿತಿಯಲ್ಲಿರುವ ಬಾಲಕನ ದೇಹ, ಕತ್ತರಿಸಿದ ತಲೆಯನ್ನು ಮಾಲ್ವಾನಿ ಪೊಲೀಸರು ಕಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಪಿಎಂಸಿ ಬ್ಯಾಂಕ್ ಹಗರಣದ ಆರೋಪಿ ರಾಕೇಶ್ಗೆ ಕೋವಿಡ್ ದೃಢ; ಸಂಬಂಧಿಕರು ಗದ್ದಲ ಸೃಷ್ಟಿಸಿದ್ದೇಕೆ?
ಬಾಲಕನ ಗುರುತು ಪತ್ತೆಹಚ್ಚಲು, ಮಾಲ್ವಾನಿ ಪೊಲೀಸರು ಕಾಣೆಯಾದ ವ್ಯಕ್ತಿಗಳ ದೂರುಗಳ ಪಟ್ಟಿಯನ್ನು ನಗರದ ಪೊಲೀಸ್ ಠಾಣೆಗಳಲ್ಲಿ ಪರಿಶೀಲಿಸಿದ್ದರು. ಕಳೆದ ವಾರ ನಾಪತ್ತೆಯಾದ ನಂತರ ಬಾಲಕನ ಪೋಷಕರು ಆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನಲ್ಲಿ ಉಲ್ಲೇಖಿಸಲಾದ ವಿವರಗಳು ಹೊಂದಿಕೆಯಾಗುತ್ತಿದ್ದಂತೆ, ಪೊಲೀಸರು ದೂರುದಾರರನ್ನು ಸಂಪರ್ಕಿಸಿ, ಅದು ಅವರ ಮಗನದೇ ದೇಹ ಎಂದು ಖಚಿತಪಡಿಸಿದರು.
ಶನಿವಾರ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಡಿಸಿಪಿ (ವಲಯ 11) ವಿಶಾಲ್ ಠಾಕೂರ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.