ಬೆಂಗಳೂರು: ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಟ್ರ್ಯಾಕ್ ಮೇಲೆ ಆತ್ಮಹತ್ಯೆಗೆ ಯತ್ನಿಸಿದ್ದು, ರೈಲು ಸಂಚಾರ ವ್ಯತ್ಯಯಗೊಂಡಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಲಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು BMRCL ಸಿಬ್ಬಂದಿ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ BMRCLನ ಹಿರಿಯ ಸಿಬ್ಬಂದಿ ಒಬ್ಬರು, ಪ್ಲಾಟ್ಫಾರ್ಮ್ ಕೊನೆಯಲ್ಲಿ ಕಾಯುತ್ತಿದ್ದ ಪ್ರಯಾಣಿಕರೊಬ್ಬರು ರೈಲು ಬರುವುದನ್ನು ನೋಡಿ ಏಕಾಏಕಿ ಜಿಗಿದಿದ್ದಾರೆ. ಕೂಡಲೇ ಇದನ್ನು ಗಮನಿಸಿದ ಸಿಬ್ಬಂದಿ ಅವರನ್ನು ರಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: ಇರಾನ್ ಜನರಲ್ ಸುಲೇಮಾನಿ ಸ್ಮರಣೆ ವೇಳೆ ಸ್ಫೋಟ; ದಾಳಿಯ ಹೊಣೆ ಹೊತ್ತ ಐಸಿಸ್
ಘಟನೆ ವೇಳೆ, ನಾಲ್ಕು ರೈಲುಗಳ ಸಂಚಾರವನ್ನು ಅವುಗಳು ಇದ್ದ ನಿಲ್ದಾಣಗಲ್ಲೇ ಸ್ಥಗಿತಗೊಳಿಸಲಾಯಿತು. ಅದರಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಲಾಗಿದೆ. ಘಟನೆ ನಂತರ ಯಶವಂತಪುರ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳ ನಡುವೆ ಮಾತ್ರ ಹಸಿರು ಮಾರ್ಗದ ಸಂಚಾರ ನಡೆಸಲಾಯಿತು.
ಆತ್ಮಹತ್ಯೆಗೆ ಯತ್ನಿಸಿದವನನ್ನು ಕೇರಳ ಮೂಲದ ಶ್ಯಾರೊನ್ (23) ಎಂದು ಗುರುತಿಸಲಾಗಿದ್ದು, ಈತನ ಸ್ಥಿತಿ ಗಂಭಿರವಾಗಿದೆ. ಹಸಿರು ಮಾರ್ಗದ ಸಂಪೂರ್ಣ ಕಾರ್ಯಾಚರಣೆಯು ರಾತ್ರಿ 08ರ ನಂತರ ಪುನರಾರಂಭವಾಗಿದೆ ಎಂದು BMRCLನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.