ಹುಬ್ಬಳ್ಳಿ: ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾದ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್ ದೊರೆತ್ತಿದ್ದು, ಬಸ್ನಲ್ಲಿ ಪ್ರಯಾಣಿಸಲು ನೂಕುನುಗ್ಗಲು ಉಂಟಾಗುತ್ತಿದೆ.
ಯೋಜನೆಗೆ ಚಾಲನೆ ನೀಡಿ ತಿಂಗಳು ಕಳೆಯುತ್ತಾ ಬಂದರೂ ಬಸ್ನಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೆಲವೆಡೆ ಮಹಿಳೆಯರು ಬಸ್ ಹತ್ತುವಾಗ ಡೋರ್, ಕಿಟಕಿಯ ಸರಳುಗಳು ಕಿತ್ತುಕೊಂಡು ಬಂದಿರುವ ಫೋಟೋ ಹಾಗು ವಿಡಿಯೋವನ್ನು ನಾವು ನೋಡಿದ್ದೇವೆ.
ಪ್ರಯಾಣದ ಆಸೆಗೆ ಬಿದ್ದು ತಗ್ಲಾಕೊಂಡ
ಇದೀಗ ಘಟನೆಯೊಂದರಲ್ಲಿ ವ್ಯಕ್ತಿಯೋರ್ವ ಉಚಿತ ಬಸ್ ಪ್ರಯಾಣಕ್ಕಾಗಿ ಮಹಿಳೆಯರಂತೆ ವೇಷ ಧರಿಸಿ ಸಿಕ್ಕಿ ಹಾಕಿಕೊಂಡಿರುವ ಘಟನೆ ಧಾರವಾಡ ಜಿಲ್ಲೆ ಕುಮದಗೋಳ ತಾಲ್ಲೂಕಿನ ಸಂಶಿಯಲ್ಲಿ ನಡೆದಿದೆ. ಬುರ್ಖಾ ಧರಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಬಂಧಿತನನ್ನು ವೀರಭದ್ರಯ್ಯ ನಿಂಗಯ್ಯ ಮಠಪತಿ(58) ಎಂದು ಗುರುತಿಸಲಾಗಿದ್ದು, ಈತ ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ನಿವಾಸಿ ಎಂದು ತಿಳಿದು ಬಂದಿದೆ. ಕುಂದಗೋಳದ ಸಂಶಿ ಬಸ್ ನಿಲ್ದಾಣದಲ್ಲಿ ಬುರ್ಖಾ ಧರಿಸಿ ವ್ಯಕ್ತಿಯೋರ್ವ ಕುಳಿತುಕೊಂಡಿರುವುದನ್ನು ಗಮನಿಸಿದ ಸಾರ್ವಜನಿಕರು ಅನುಮಾನಗೊಂಡು ವಿಚಾರಿಸಿದಾಗ ಆತ ಮಹಿಳೆ ಅಲ್ಲ ಪುರುಷ ಎಂದು ತಿಳಿದು ಬಂದಿದೆ.
ವೀರಭದ್ರಯಯ್ಯನ ಬಳಿ ಮಹಿಳೆಯೊಬ್ಬರ ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಉಚಿತ ಬಸ್ ಪ್ರಯಾಣಕ್ಕಾಗಿ ಈ ರೀತಿ ಮಾಡುತ್ತಿದ್ದೀಯಾ ಎಂದು ಸಾರ್ವಜನಿಕರು ಆತನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಆತ ಭಿಕ್ಷಾಟನೆಗಾಗಿ ವೇಷ ಧರಿಸಿರುವುದಾಗಿ ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ವೀರಭದ್ರಯಯ್ಯನ ಚಲನವಲನವನ್ನು ಗಮನಿಸಿದ ಸಾರ್ವಜನಿಕರು ಆತ ತೊಟ್ಟಿದ್ದ ಬುರ್ಖಾ ಬಿಚ್ಚಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ವರ್ಗಾವಣೆ ದಂಧೆ ಆರೋಪ; ಮಾಜಿ ಸಿಎಂ ಎಚ್.ಡಿ.ಕೆ-ಸಚಿವ ಜಾರ್ಜ್ ನಡುವೆ ಮಾತಿನ ಚಕಮಕಿ
ತೀವ್ರ ವಿಚಾರಣೆ
ಈ ಕುರಿತು ಪ್ರತಿಕ್ರಿಯಿಸಿರುವ ಕುಂದಗೋಳ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ವೀರಭದ್ರಪ್ಪ ರೈಲಿನ ಮೂಲಕ ಬೆಂಗಳೂರಿನಿಂದ ಕುಂದಗೋಳದ ಸಂಶಿಗೆ ಬಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ರೈಲಿನಲ್ಲಿ ಸಂಚರಿಸುವ ವೇಳೆ ಮಹಿಳೆಯೊಬ್ಬರ ಬ್ಯಾಗಿನಲ್ಲಿ ದೊರೆತ ಬುರ್ಖಾ ಧರಿಸಿ ಬಸ್ ಸ್ಟ್ಯಾಂಡಿನಲ್ಲಿ ಕುಳಿತ್ತಿದ್ದನ್ನು ಗಮನಿಸಿದ ಸಾರ್ವಜನಿಕರು ಹಿಡಿದು ವಿಚಾರಣೆ ನಡೆಸಿದಾಗ ವಿಚಾರ ಬೆಳಕಿಗೆ ಬಂದಿದೆ.
ವೀರಭದ್ರಪ್ಪನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಶೀಘ್ರದಲ್ಲೇ ಮತ್ತಷ್ಟು ಮಾಹಿತಿಯನ್ನು ಹಮಚಿಕೊಳ್ಳಲಾಗುವುದು ಎಂದು ಕುಂದಗೋಳ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.