More

    ‘ಇದು ಕಾಂಗ್ರೆಸ್ ಸೋಲು, ಜನರದ್ದಲ್ಲ’: ಮಮತಾ ಪ್ರತಿಕ್ರಿಯೆ – ‘ಕೈ’ ವಿರುದ್ಧ ಮುಗಿಬಿದ್ದ ‘ಇಂಡಿಯಾ’ ಸದಸ್ಯ ಪಕ್ಷಗಳು!

    ನವದೆಹಲಿ: ಮೂರು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳಲ್ಲಿ ಸೋಲು ಕಂಡಿರುವ ಕಾಂಗ್ರೆಸ್‌ ವಿರುದ್ಧ ಐಎನ್‌ಡಿಐಎ ಮೈತ್ರಿಕೂಟದ ಸದಸ್ಯ ಪಕ್ಷಗಳು ಹರಿಹಾಯ್ದಿವೆ. ಇದು ಜನರ ಸೋಲಲ್ಲ, ಆದರೆ ಕಾಂಗ್ರೆಸ್‌ನ ಪರಾಭವ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವ್ಯಾಖ್ಯಾನಿಸಿದ್ದಾರೆ.
    ಐಎನ್‌ಡಿಐಎದ ಇತರೆ ಸದಸ್ಯರ ಜತೆ ಸೀಟು ಹಂಚಿಕೆ ವ್ಯವಸ್ಥೆ ಮಾಡದೆ ಇರುವುದು ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. “ಇದು ಕಾಂಗ್ರೆಸ್‌ನ ಸೋಲು, ಜನರ ಸೋಲಲ್ಲ” ಎಂದು ಒತ್ತಿ ಹೇಳಿದ್ದಾರೆ.

    ಇದನ್ನೂ ಓದಿ: ಭಾರಿ ಮಳೆಗೆ ಚೆನ್ನೈನಲ್ಲಿ 5 ಸಾವು – ಸೋಮವಾರ ಅರ್ಧರಾತ್ರಿವರೆಗೆ ವಿಮಾನಗಳಿಲ್ಲ
    “ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದೆ. ಅದು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕೂಡ ಗೆಲ್ಲಬಹುದಾಗಿತ್ತು. ಕೆಲವು ಮತಗಳನ್ನು ಐಎನ್‌ಡಿಐಎ ಪಕ್ಷಗಳು ಒಡೆದಿದ್ದವು. ಇದು ಸತ್ಯ. ನಾವು ಸೀಟು ಹಂಚಿಕೆ ವ್ಯವಸ್ಥೆಯ ಸಲಹೆ ನೀಡಿದ್ದೆವು. ಅವರು ಮತಗಳ ವಿಭಜನೆಯಿಂದಾಗಿ ಸೋತಿದ್ದಾರೆ” ಎಂದು ಮಮತಾ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

    “ಸಿದ್ಧಾಂತದ ಜತೆಗೆ ನಿಮಗೆ ಕಾರ್ಯತಂತ್ರ ಇರುವುದು ಕೂಡ ಅಗತ್ಯವಾಗಿದೆ. ಸೀಟು ಹಂಚಿಕೆ ಸೂತ್ರವಿದ್ದರೆ 2024ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ” ಎಂದು ಮಮತಾ ಹೇಳಿದ್ದಾರೆ.

    ಪ್ರತಿಪಕ್ಷಗಳ ಐಎನ್‌ಡಿಐಎ ಬಣವು ಒಟ್ಟಾಗಿ ಕೆಲಸ ಮಾಡಲಿದೆ ಮತ್ತು ಮುಂದಿನ ವರ್ಷದ ಲೋಕಸಭೆ ಚುನಾವಣೆಗೂ ಮುನ್ನ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

    ಸಮಾಜವಾದಿ ಪಕ್ಷ ಕಿಡಿ: ಮಧ್ಯಪ್ರದೇಶದಲ್ಲಿ ಅಖಿಲೇಶ್ ಯಾದವ್ ಕಾಂಗ್ರೆಸ್ ಜತೆ ಸೀಟು ಹಂಚಿಕೆ ಒಪ್ಪಂದಕ್ಕೆ ಪ್ರಯತ್ನಿಸಿದ್ದರು. ಆದರೆ ಕಾಂಗ್ರೆಸ್‌ನಿಂದ ಸ್ಪಂದನೆ ದೊರಕಿರಲಿಲ್ಲ. ‘ಅಖಿಲೇಶ್ ವಖಿಲೇಶ್ ಎಲ್ಲ ಬಿಡಿ’ ಎಂದು ಕಮಲ್ ನಾಥ್ ವ್ಯಂಗ್ಯವಾಡಿದ್ದರು. “ಕಮಲ್ ನಾಥ್ ಅವರು ಅಖಿಲೇಶ್ ಕುರಿತು ಬಳಸಿದ ಅವಮಾನಕರ ಪದವು ಕಾಂಗ್ರೆಸ್ ಸೋಲಿಗೆ ಕಾರಣ. ಕಾಂಗ್ರೆಸ್ ಘನತೆಯಿಲ್ಲದ ಹೇಳಿಕೆಗಳಿಂದಾಗಿ ಸೋತಿದೆ” ಎಂದು ಸಮಾಜವಾದಿ ಪಕ್ಷದ ವಕ್ತಾರ ಮನೋಜ್ ಯಾದವ್ ಕಿಡಿಕಾರಿದ್ದಾರೆ.

    ಉತ್ತರದ ಮೂರು ರಾಜ್ಯಗಳ ಸೋಲು ವಿರೋಧ ಪಕ್ಷಗಳ ಮೈತ್ರಿಕೂಟದಲ್ಲಿನ ಕಾಂಗ್ರೆಸ್ ನಾಯಕತ್ವಕ್ಕೆ ಭಾರಿ ಹೊಡೆತ ನೀಡಿದೆ. ಐಎನ್‌ಡಿಐಎ ಮೈತ್ರಿಕೂಟ ರಚಿಸಿಕೊಂಡಿದ್ದರೂ, ವಿಧಾನಸಭೆ ಚುನಾವಣೆಗಲ್ಲಿ ಪ್ರಾದೇಶಿಕ ಪಕ್ಷಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸುವ ಹುಂಬತನಕ್ಕೆ ಕಾಂಗ್ರೆಸ್ ಕೈ ಹಾಕಿದ್ದೇ ಈ ಸೋಲಿಗೆ ಕಾರಣ ಎಂದು ಅದರ ಮಿತ್ರ ಪಕ್ಷಗಳು ಬೊಟ್ಟುಮಾಡಿವೆ.

    ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಜೆಪಿ ವಿರುದ್ಧದ ಹೋರಾಟದಲ್ಲಿ, ಪ್ರಾದೇಶಿಕ ಪಕ್ಷಗಳು ತಾವು ಪ್ರಬಲವಾಗಿರುವ ಕಡೆ ಒಕ್ಕೂಟವನ್ನು ಮುನ್ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.

    ‘ಬಿಜೆಪಿ ನನ್ನ ಮಾತನ್ನು ತಿರುಚಿ, ದೊಡ್ಡದು ಮಾಡಿದೆ’: ‘ಸನಾತನ ಧರ್ಮ ನಿರ್ಮೂಲನೆ’ ಹೇಳಿಕೆ ಸಮರ್ಥನೆಗೆ ಮುಂದಾದ ಉದಯನಿಧಿ ಸ್ಟಾಲಿನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts