ಮಹಾಲಿಂಗಪುರ: ಪೆಟ್ರೋಲ್,ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಕರೊನಾ ಸಂಕಷ್ಟದಿಂದಾಗಿ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.
ಸ್ಥಳೀಯ ಬಸ್ ನಿಲ್ದಾಣದ ಹತ್ತಿರದ ಗಣಪತಿ ದೇವಸ್ಥಾನದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸೈಕಲ್ ಜಾಥಾದಲ್ಲಿ ಸೈಕಲ್ ಏರಿ ಪ್ರತಿಭಟಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಹೆಚ್ಚಿದ ಕರೊನಾ ಆರ್ಭಟಕ್ಕೆ ಜನ ಕೆಲಸ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಲಾಕ್ಡೌನ್ ಸಮಯದಲ್ಲಿ ಕೆಲಸಮಾಡಲಾಗದೆ, ಜೀವನ ನಡೆಸಲು ತೊಂದರೆ ಅನುಭವಿಸಿದ್ದಾರೆ. ಈ ಕಷ್ಟದ ಪರಿಸ್ಥಿತಿ ಯಾವಾಗ ಮುಗಿಯುತ್ತದೆಯೋ, ಯಾವಾಗ ನಾವು ಕೆಲಸಕ್ಕೆ ಹೋಗಿ ಸಂಪಾದನೆ ಮಾಡುತ್ತೇವೆ ಎನ್ನುವ ಸಂದರ್ಭದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಬೆಲೆ ಏರಿಕೆಗೆ ಜನ ತತ್ತರಿಸಿಹೋಗಿ ಈ ಸರ್ಕಾರದ ವಿರುದ್ದ ಬೇಸತ್ತು ಹೋಗಿದ್ದಾರೆ. ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಜನರ ಕಷ್ಟದ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಎಲ್ಲ ಬೆಲೆಗಳನ್ನು ಕಡಿಮೆ ಮಾಡಿ ಜನಸಾಮಾನ್ಯರು ನೆಮ್ಮದಿಯಿಂದ ಬದುಕುವಂತೆ ಮಾಡಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಡಾ.ಎ.ಆರ್.ಬೆಳಗಲಿ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲಿ ್ಲಕಚ್ಚಾ ತೈಲದ ಬೆಲೆ ಕಡಿಮೆ ಬೆಲೆಗೆ ಸಿಗುತ್ತಿದ್ದರೂ ಪೆಟ್ರೋಲ್ ಬೆಲೆ ಗಗನಮುಖಿಯಾಗಿದೆ. ಕೂಡಲೇ ಬೆಲೆ ಇಳಿಸಬೇಕು ಎಂದರು.
ಗಣಪತಿ ದೇವಸ್ಥಾನದಿಂದ ಜವಳಿ ಬಜಾರ್, ನಡುಚೌಕಿ, ಮಹಾಲಿಂಗೇಶ್ವರ ದೇವಸ್ಥಾನ, ಬಸವೇಶ್ವರ ವೃತ್ತದ ಮೂಲಕ ಪುರಸಭೆವರೆಗೆ ಸೈಕಲ್ ಜಾಥಾ ನಡೆಸಲಾಯಿತು. ಜಾಥಾ ಉದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕಾರ್ಯರ್ತರು ಘೋಷಣೆ ಕೂಗಿದರು.
ಕಿಸಾನ್ ಗ್ರೆಸ್ ರಾಜ್ಯ ಸಂಚಾಲಕ ಸಿದ್ದು ಕೊಣ್ಣೂರ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ, ಮುಖಂಡರಾದ ಲಕ್ಷ್ಮ್ಮಣ ದಾಸರಟ್ಟಿ, ಮಲ್ಲಪ್ಪ ಭಾವಿಕಟ್ಟಿ, ಬಸವರಾಜ ಕರೆಹೊನ್ನ, ವಿಜಯ ಮಾಲಬಸರಿ,ವಿನೋದ ಶಿಂಪಿ, ಮಹಾದೇವ ಕಡಬಲ್ಲವರ, ದೇವರೇಶ ಉಳ್ಳಾಗಡ್ಡಿ,ನಾನಾ ಜೋಶಿ, ರಾಜು ಭಾವಿಕಟ್ಟಿ, ಶಂಕರ ಸೊನ್ನದ, ಸಿದ್ದು ಬೇನೂರ ಮತ್ತಿತರರು ಇದ್ದರು.