ಭೋಪಾಲ: ಮಧ್ಯಪ್ರದೇಶದಲ್ಲಿ ಸದ್ಯ ಸೃಷ್ಟಿಯಾಗಿರುವ ರಾಜಕೀಯ ಸನ್ನಿವೇಶ ಕಾಂಗ್ರೆಸ್ ಪಕ್ಷದೊಳಗಿನ ಸಮಸ್ಯೆಯೇ ಹೊರತು, ಇಲ್ಲಿ ಯಾವುದೇ ಆಪರೇಷನ್ ಕಮಲ ನಡೆದಿಲ್ಲ ಎಂದು ಬಿಜೆಪಿ ಶಾಸಕ ವಿಶ್ವಾಸ್ ಸಾರಂಗ್ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದೊಳಗೆ ಭಿನ್ನಮತ ಹೆಚ್ಚಾಗಿದೆ. ಕೆಲವೇ ಕೆಲವು ರಾಜಕಾರಣಿಗಳ ಸುತ್ತ ಸುತ್ತುತ್ತ ಸರ್ಕಾರ ನಡೆಸುವುದು ಸಾಧ್ಯವಿಲ್ಲ ಎಂಬುದು ಕಮಲನಾಥ್ ಮತ್ತು ಕಾಂಗ್ರೆಸ್ ಗೆ ಮನವರಿಕೆ ಆಗಿರಬೇಕು. ಸರ್ಕಾರ ನಡೆಸುವ ವಿಚಾರದಲ್ಲಿ ಕಂಡುಬಂದಿರುವ ಭಿನ್ನಮತ ಈಗ ಬಹಿರಂಗವಾಗಿದೆ ಎಂದು ಸಾರಂಗ್ ವ್ಯಾಖ್ಯಾನಿಸಿದ್ದಾರೆ.
ಇದೇ ರೀತಿ, ಅಜೆಯ್ ಸಿಂಗ್, ಬಿಸಾಹುಲಾಲ್ ಸಿಂಗ್ ಅವರ ಹೇಳಿಕೆ ಮತ್ತು ಜ್ಯೋತಿರಾದಿತ್ಯ ಸಿಂಧ್ಯಾ, ಕಾಂತಿಲಾಲ್ ಭುರಿಯಾ ವರ ನೋವುಗಳನ್ನು ಗಮನಿಸಿದರೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯ ನಾಯಕರ ನೋವು ಎಂಬುದು ವೇದ್ಯವಾಗುತ್ತದೆ. ಕಮಲನಾಥ್ ಅವರು ಈ ನಾಯಕ ಶ್ರಮವನ್ನು ನಿರ್ಲಕ್ಷಿಸಿ ಮಧ್ಯಪ್ರದೇಶವನ್ನು ಖಾಸಗಿ ನಿಯಮಿತ ಕಂಪನಿಯನ್ನಾಗಿ ಪರಿವರ್ತಿಸಿದ್ದರು ಎಂಬ ನೋವು ಆ ಹಿರಿಯ ನಾಯಕರ ಮಾತುಗಳಲ್ಲಿ ವ್ಯಕ್ತವಾಗುತ್ತದೆ ಎಂದು ಸಾರಂಗ್ ವಿವರಿಸಿದ್ದಾರೆ. (ಏಜೆನ್ಸೀಸ್)