ಭೋಪಾಲ: ರಾಜಕೀಯ ಅಸ್ಥಿರತೆ ಮುಂದುವರಿದಿರುವ ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಕಮಲನಾಥ್ ವಿರುದ್ಧ ಶುರುವಾಗಿರುವ ಬಂಡಾಯ ಕ್ಷಣ ಕ್ಷಣಕ್ಕೆ ಹೊಸ ಹೊಸ ತಿರುವು ಪಡೆಯುತ್ತಿದೆ. ಮಾಜಿ ಸಂಸದ ಜ್ಯೋತಿರಾದಿತ್ಯ ಸಿಂಧ್ಯಾ ಅವರ ಬೆಂಬಲಿಗರ ಬಂಡಾಯ ಶಮನ ಮಾಡುವುದು ಕಮಲನಾಥ್ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸೋಮವಾರ ತುರ್ತಾಗಿ ದೆಹಲಿಗೆ ತೆರಳಿದ್ದ ಸಿಎಂ ಕಮಲನಾಥ್ ಅಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ಮರಳಿದ್ದಾರೆ.
ಇದರ ಬೆನ್ನಲ್ಲೇ ಸಿಎಂ ಕಮಲನಾಥ್ ಅವರು ಭೋಪಾಲದ ತಮ್ಮ ನಿವಾಸದಲ್ಲೇ ತುರ್ತು ಕ್ಯಾಬಿನೆಟ್ ಸಭೆಯನ್ನು ರಾತ್ರಿ 10 ಗಂಟೆಗೆ ಕರೆಯುವ ಮೂಲಕ ಎಲ್ಲರ ಕುತೂಹಲವನ್ನು ತಮ್ಮೆಡೆ ಸೆಳೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು ಪಕ್ಷದ ನಾಯಕರು ಮತ್ತು ತಮ್ಮ ಆಪ್ತ ಬಳಗದೊಂದಿಗೆ ಸುಮಾರು 2 ತಾಸು ಸಭೆ ನಡೆಸಿದ್ದರು.
ಸೋನಿಯಾ ಗಾಂಧಿ ಅವರನ್ನು ರಾಜ್ಯಸಭಾ ಚುನಾವಣೆ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ, ಪಕ್ಷದೊಳಗಿನ ರಾಜಕೀಯ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿ ಚರ್ಚಿಸುವ ಸಲುವಾಗಿ ಸಿಎಂ ಕಮಲನಾಥ್ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಅಲ್ಲಿ ನಡೆದ ಮಾತುಕತೆಗಳ ವಿವರ ಇನ್ನೂ ಬಹಿರಂಗವಾಗಿಲ್ಲ. ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಮಹತ್ವದ ನಿರ್ಧಾರ ಹೊರಬೀಳುವ ನಿರೀಕ್ಷೆಯಲ್ಲಿದೆ ರಾಜಕೀಯ ಚಾವಡಿ. (ಏಜೆನ್ಸೀಸ್)