ಹೈದರಾಬಾದ್: 2023ರ ವರ್ಷಾಂತ್ಯದಲ್ಲಿ ನಡೆದ ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳಾದ ಕಸಿಆರ್ ಹಾಗೂ ರೇವಂತ್ ರೆಡ್ಡಿ ಅವರಿಗೆ ಸೋಲುಣಿಸುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಸದ್ದು ಮಾಡಿದ್ದ ಬಿಜೆಪಿ ಶಾಸಕ ಕಾಟಿಪಲ್ಲಿ ವೆಂಕಟರಮಣ ರೆಡ್ಡಿ ಈಗ ಜನಸೇವೆಯಲ್ಲೂ ತಮ್ಮ ಛಾಪನ್ನು ತೋರುತ್ತಿದ್ದು, ಈಗ ಮತ್ತೊಂದು ವಿಚಾರವಾಗಿ ಎಲ್ಲರ ಗಮನ ಸೆಳೆದಿದ್ದಾರೆ.
ಕಾಮರೆಡ್ಡಿ ವಿಧಾನಸಭಾ ಕ್ಷೇತ್ರದ ರಸ್ತೆ ಅಗಲೀಕರಣ ವಿಚಾರವಾಗಿ ಬಿಜೆಪಿ ಶಾಸಕ ವೆಂಕಟರಮಣ ರೆಡ್ಡಿ ತಮ್ಮ ಸ್ವಂತ ಮನೆಯನ್ನೇ ಕೆಡವಲು ಮುಂದಾಗಿದ್ದು, ಈ ವಿಚಾರ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.
ಇದನ್ನೂ ಓದಿ: ಉದ್ಘಾಟನೆಯಾದ 11 ದಿನದಲ್ಲಿ ಬಾಲರಾಮನ ದರ್ಶನ ಪಡೆದ 25 ಲಕ್ಷಕ್ಕೂ ಅಧಿಕ ಭಕ್ತರು; ಸಂಗ್ರಹವಾದ ಕಾಣಿಕೆ ಎಷ್ಟು ಗೊತ್ತಾ?
ಕಾಮರೆಡ್ಡಿ ರಸ್ತೆ ಕಿರಿದಾಗಿರುವ ಕಾರಣ ಅಗಲೀಕರಣ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ನಿಮ್ಮ ಕೆಲಸಕ್ಕೆ ನಾವು ಅಡ್ಡಿಪಡಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ. ನನ್ನ ಮನೆಯನ್ನು ನೆಲಸಮ ಮಾಡಲು ಅವಕಾಶ ನೀಡುವ ಮೂಲಕ ನಾನು ದೊಡ್ಡ ಸೇವೆ ಮಾಡುತ್ತಿದ್ದೇನೆ ಎಂದು ನಾನು ಭಾವಿಸುವುದಿಲ್ಲ. ನಾನು ಕಾಮರೆಡ್ಡಿ ಜನರ ಅನುಕೂಲಕ್ಕಾಗಿ ನನ್ನ ಮನೆಯನ್ನು ಕೆಡವಿದ್ದೇನೆ. ಬೇಕಿದ್ದರೆ ನನ್ನ ಸ್ವಂತ ಹಣದಲ್ಲಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸಿದ್ದನಿದ್ದೇನೆ ಬಿಜೆಪಿ ಶಾಸಕ ವೆಂಕಟರಮಣ ರೆಡ್ಡಿ ಹೇಳಿದ್ದಾರೆ.
ಕಾಮರೆಡ್ಡಿ ಕ್ಷೇತ್ರದ ಶಾಸಕರ ಭವನದಿಂದ ಹಳೇ ಬಸ್ ನಿಲ್ದಾಣದವರೆಗಿನ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿರುವ ಕಟ್ಟಡಗಳಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ರಸ್ತೆ ಅಗಲೀಕರಣಕ್ಕೆ ಇರುವ ಅಡೆತಡೆಗಳಲ್ಲಿ ಸರ್ಕಾರಿ ಸಲಹೆಗಾರ ಶಬ್ಬೀರ್ ಅಲಿ ನಿವಾಸ ಸೇರಿದಂತೆ ಎರಡು ಚಿತ್ರಮಂದಿರಗಳೂ ಇವೆ ಎಂದು ತಿಳಿದು ಬಂದಿದೆ.