ರಾಯಚೂರು: ಲಾಕ್ಡೌನ್ ಕಟ್ಟುನಿಟ್ಟಿನ ಜಾರಿಗೆ ಅಧಿಕಾರಿಗಳು ಮುಂದಾಗಿದ್ದು, ನಗರ, ಪಟ್ಟಣದ ಜನ ಒಂದು ಕಾಲನಿಯಿಂದ ಮತ್ತೊಂದು ಕಾಲನಿಗೆ ಹೋಗಬೇಕಾದರೆ ಪೊಲೀಸರಿಗೆ ಇನ್ಮುಂದೆ ಸೂಕ್ತ ಕಾರಣ ನೀಡಲೇಬೇಕು.
ಜಿಲ್ಲಾದ್ಯಂತ ಲಾಕ್ಡೌನ್ ಪಾಲಿಸಿದ ಜನರಿಗೆ ಪೊಲೀಸರು ಬಿಸಿ ಮುಟ್ಟಿಸಲು ಬೈಕ್ ಸೀಜ್ ಹಿಡಿದಿದ್ದಾಯಿತು, ದಂಡವೂ ಹಾಕಿದ್ದಾಯಿತು. ಆದರೆ ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗಾಗಿ ಇಲಾಖೆ ಶುಕ್ರವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆಗೆ ಇಳಿದಿದ್ದು, ಜಿಲ್ಲೆಯ ಹತ್ತು ನಗರ, ಪಟ್ಟಣ ಪ್ರದೇಶಗಳಲ್ಲಿ ಪೊಲೀಸರು ಅಂತರ್ ಲಾಕ್ಡೌನ್ಗೆ ಮುಂದಾಗಿದ್ದಾರೆ. ಅನಗತ್ಯವಾಗಿ ಒಂದು ಕಾಲನಿಯಿಂದ ಮತ್ತೊಂದು ಕಾಲನಿಗೆ ಓಡಾಡದಂತೆ ತಡೆಯಲು ಇಲಾಖೆ ಸುಮಾರು ನಾಲ್ಕು ಸಾವಿರ ಬ್ಯಾರಿಕೇಡ್, ಕಬ್ಬಿಣದ ಸರಳುಗಳನ್ನು ನೆಟ್ಟಿದೆ. ಜತೆಗೆ ಬಡಾವಣೆಗಳ ಎಲ್ಲ ಅಡ್ಡದಾರಿಗಳನ್ನೂ ಬಂದ್ ಮಾಡಿದೆ. ಆರೋಗ್ಯ, ಸರ್ಕಾರಿ ಸೇವೆ ಸೇರಿ ತುರ್ತು ಇದ್ದವರಿಗೆ ಹಾಗೂ ಸೂಕ್ತ ಕಾರಣ ನೀಡಿದವರಿಗೆ ವಿನಾಯಿತಿ ನೀಡಲಾಗಿದೆ. ಅಲ್ಲದೆ, ಆಯಾ ವಾರ್ಡುಗಳಲ್ಲಿಯೇ ದಿನಸಿ, ಅಗತ್ಯ ಸಾಮಗ್ರಿ, ಖರೀದಿಸಬೇಕೆಂದು ಇಲಾಖೆ ಕಟ್ಟಪ್ಪಣೆ ನೀಡುವ ಮೂಲಕ ಸೋಂಕು ನಿಯಂತ್ರಣಕ್ಕೆ ಮುಂದಾಗಿದೆ.