ಬೆಂಗಳೂರು: ಕರೊನಾ ಸೋಂಕು ಹರಡದಂತೆ ಚಾಲ್ತಿಯಲ್ಲಿರುವ ಲಾಕ್ಡೌನ್ ವಿಚಾರದ ಬಗ್ಗೆ ನಾಳೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಹೇಳಿದರು.
ಅವರು ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರ ಜತೆಗೆ ಮಾತನಾಡುತ್ತ, ಲಾಕ್ಡೌನ್ ಮುಂದುವರಿಸುವಂತೆ ಸಚಿವ ಸಂಪುಟ ಸದಸ್ಯರೆಲ್ಲರೂ ಒಟ್ಟಾಗಿ ಆಗ್ರಹಿಸಿದ್ದಾರೆ. ಅಲ್ಲದೆ, ಪರಿಣತರ ಸಲಹೆಯೂ, ಶಿಫಾರಸೂ ಅದೇ ಆಗಿದೆ. ಲಾಕ್ಡೌನ್ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಏಪ್ರಿಲ್ 14 ರ ತನಕ ಯಾರೂ ಮನೆಯಿಂದ ಹೊರಬರಬೇಡಿ. ಅದೇ ರೀತಿ ಅವ್ಯವಸ್ಥಿತ ರೀತಿಯಲ್ಲಿ ಸಾರ್ವಜನಿಕ ಸಂತೆ ನಡೆಸಿದರೂ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಹಾಗೆಯೇ ಪ್ರತಿಯೊಂದು ಜಿಲ್ಲೆಗೂ ಇಂದು ಸಂಜೆ ಒಳಗೆ ಉಸ್ತುವಾರಿ ಸಚಿವರ ನೇಮಕ ಮಾಡಲಾಗುತ್ತದೆ ಎಂದು ಹೇಳಿದರು.
ಇಪ್ಪತ್ತೊಂದು ದಿನಗಳ ಲಾಕ್ಡೌನ್ ಇನ್ನು ನಾಲ್ಕು ದಿನಗಳಲ್ಲಿ ಮುಕ್ತಾಯವಾಗುವ ಕಾರಣ ನಾಳೆ ಪ್ರಧಾನಮಂತ್ರಿಯವರ ಜತೆಗೆ ಮಾತುಕತೆ ನಡೆಸಲಾಗುತ್ತದೆ. ಅವರ ಜತೆಗೆ ಚರ್ಚೆ ನಡೆಸಿದ ಬಳಿಕ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು ಎಂದು ಸಿಎಂ ಬಿಎಸ್ವೈ ಸ್ಪಷ್ಟಪಡಿಸಿದರು.
ಇದೇ ವೇಳೆ, ರಾಜ್ಯದಲ್ಲಿ ಮಳೆ ಆರಂಭವಾದ ಕಾರಣ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಎಚ್ಚರ ವಹಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಜತೆ ಚರ್ಚೆ ಮಾಡಲಾಗಿದೆ. ಮಳೆ ಆರಂಭವಾಗಿರುವುದರಿಂದ ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಹೂವು ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಲಾಗುವುದು. ರಾಜ್ಯದಲ್ಲಿ ಯಾರೊಬ್ಬರೂ ಸಹ ಹಸಿವಿನಿಂದಿರಬಾರದು. ಈ ನಿಟ್ಟಿನಲ್ಲಿ ಎಲ್ಲ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಿಎಂ ಹೇಳಿದರು.
ಸಕ್ಕರೆ ಹೊದಿಕೆಯಲ್ಲಿ ಅವಿತು ದೇಹ ಪ್ರವೇಶಿಸುವ ಕರೊನಾ ಕುರಿಯ ವೇಷದ ತೋಳ ಈ ವೈರಸ್