ಕಾರ್ಗಲ್: ಜೈನ ಧರ್ಮಕ್ಕೆ ಪ್ರಾಚೀನ ಇತಿಹಾಸವಿದೆ. ಅಹಿಂಸೆ ಮತ್ತು ಶಾಂತಿಯನ್ನು ಸಾರುವ ಪ್ರಮುಖ ಧರ್ಮ ಎಂದು ಸೋಂದಾ ಶ್ರೀಕ್ಷೇತ್ರ ಸ್ವಾದಿ ಜೈನಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಹೇಳಿದರು.
ಅತಿಶಯ ಸಿದ್ಧಗಿರಿ ಕ್ಷೇತ್ರ ವಡನ್ಬೈಲ್ನಲ್ಲಿ ಭಾನುವಾರ ಆಯೋಜಿಸಿದ್ದ ಪಾರ್ಶ್ವನಾಥ ಸ್ವಾಮಿ ಪಂಚಕಲ್ಯಾಣ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪ್ರತಿಯೊಂದು ಊರು ಕೇರಿಗಳಲ್ಲೂ ಜೈನಧರ್ಮದ ಇತಿಹಾಸದ ಕುರುಹುಗಳು ಸಿಗುತ್ತವೆ. ಮತ್ತಷ್ಟು ಆಳವಾದ ಅಧ್ಯಯನ ನಡೆದಷ್ಟು ಇತಿಹಾಸ ದೊರಕುತ್ತದೆ. ಇತಿಹಾಸವನ್ನು ತಿಳಿದಷ್ಟು ನಿಜವಾದ ಮಾಹಿತಿ ಸಿಗುತ್ತದೆ. ಅಹಿಂಸೆ, ಶಾಂತಿ ಮತ್ತು ಸಹಬಾಳ್ವೆ ಸಾರಿದ ಧರ್ಮದ ತತ್ವಗಳನ್ನು ಅರಿತು ಬಾಳಿದರೆ ಜಗತ್ತು ಸುಭೀಕ್ಷವಾಗಿರಲು ಸಾಧ್ಯ ಎಂದರು.
ಜೈನ ಮುನಿ 108 ಪುಣ್ಯಸಾಗರ ಮಹಾರಾಜರು ಆಶೀರ್ವಚನ ನೀಡಿ, ಜೈನ ಧರ್ಮದಲ್ಲಿ ಶ್ರಾವಕ ಧರ್ಮ ಅತ್ಯಂತ ಮಹತ್ವದ್ದು. ಸ್ತ್ರೀಯರಿಗೆ ವಿಶೇಷ ಗೌರವವಿದೆ. ತೀರ್ಥಂಕರರಂತಹ ಮಹಾನ್ ವ್ಯಕ್ತಿಗಳಿಗೆ ಜನ್ಮ ನೀಡುವುದೆಂದರೆ ಸಾಮಾನ್ಯ ಸಂಗತಿಯಲ್ಲ. ಹೆಣ್ಣು ಮಕ್ಕಳಲ್ಲಿ ಒಳ್ಳೆಯ ಚಿಂತನೆ, ಧಾರ್ಮಿಕ ಆಲೋಚನೆಗಳಿರಬೇಕು. ಅಲ್ಲದೆ ಗರ್ಭದಲ್ಲಿರುವ ಜೀವಕ್ಕೆ ಉತ್ತಮ ನಡವಳಿಕೆಗಳು ಸಿಗಬೇಕಾದರೆ ತಾಯಿಯ ನಡವಳಿಕೆಯೂ ಉತ್ತಮವಾಗಿರಬೇಕು. ಆದರ್ಶ ಬದುಕನ್ನು ನಡೆಸುವಂತಾಗಬೇಕು. ಮತ್ತೊಬ್ಬರಿಗೆ ಮಾದರಿಯಾಗಿರಬೇಕು ಎಂದು ಹೇಳಿದರು.
ಇತಿಹಾಸ ಸಂಶೋಧಕ ಅಜಯ್ಕುಮಾರ್ ಶರ್ಮ ಮಾತನಾಡಿ, ಜೈನ ಧರ್ಮಕ್ಕೆ ಸಾಕಷ್ಟು ಇತಿಹಾವಿದೆ. ಇಲ್ಲಿ ಸಾಕಷ್ಟು ರಾಜ ಮನೆತನಗಳು ಆಳ್ವಿಕೆ ನಡೆಸಿವೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಜೈನ ಅರಸಿಯರೇ ಹೆಚ್ಚು ಕಂಡುಬರುತ್ತಾರೆ. ವಿಶೇಷವಾಗಿ ಅಬ್ಬಕ್ಕ ರಾಣಿ, ಚನ್ನಭೈರಾದೇವಿ ಇತಿಹಾಸವನ್ನು ತಿಳಿದುಕೊಂಡಲ್ಲಿ ಮೈ ರೋಮಾಂಚನವಾಗುತ್ತದೆ. ಅವರ ಹೋರಾಟದ ಬದುಕು ಇಂದಿಗೂ ಸ್ಫೂರ್ತಿದಾಯಕ. ಶಿಕ್ಷಣ, ಕೃಷಿ, ವ್ಯಾಪಾರ ಮೊದಲಾದ ಕ್ಷೇತ್ರಗಳಿಗೆ ವಿಶೇಷ ಮಹತ್ವ ನೀಡಿದ ಚನ್ನಭೈರಾದೇವಿ ವಿದೇಶಿಯರಿಗೆ ಸಿಂಹಸ್ವಪ್ನವಾಗಿದ್ದಳು ಎನ್ನುವುದನ್ನು ನಮ್ಮ ಇತಿಹಾಸ ತಿಳಿಸುತ್ತದೆ ಎಂದು ಹೇಳಿದರು.
ಕಂಬದಹಳ್ಳಿ ಜೈನ ಮಠದ ಭಾನುಕೀರ್ತಿ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ದೇವಾಲಯದ ಧರ್ಮದರ್ಶಿ ಎಚ್.ಎಂ.ವೀರರಾಜಯ್ಯ ಜೈನ್, ಬಬಿತಾ ಪ್ರೇಮಕುಮಾರ್, ಪ್ರಮುಖರಾದ ರತ್ನಕುಮಾರ್, ನಾಗರಾಜ್, ಯಶೋಧರ ಹೆಗ್ಡೆ, ಎಚ್.ವೈ.ರವಿಕುಮಾರ್, ತಾತಾ ಸಾಹೇಬ್ ಕೊಣ್ಣೂರು, ಮಹಾವೀರ ಜೈನ್, ವಿಜೇಯೇಂದ್ರ ಜೈನ್, ವಿ.ಟಿ.ಸ್ವಾಮಿ ಇತರರಿದ್ದರು.