ಶಿವಮೊಗ್ಗ: ನಗರದ ಗೋಪಶೆಟ್ಟಿಕೊಪ್ಪ ಬಡಾವಣೆ ಸಾಹಿತ್ಯ ಗ್ರಾಮದಲ್ಲಿ ಜ.31ರಿಂದ ಮೂರು ದಿನಗಳ ಶಿವಮೊಗ್ಗ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಾಹಿತಿ ಡಾ. ವಿಜಯಾದೇವಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಿ.ಬಿ.ಶಂಕರಪ್ಪ ತಿಳಿಸಿದರು.
ಜ.31ರ ಬೆಳಗ್ಗೆ 8.30ಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ರಾಷ್ಟ್ರ ಧ್ವಜಾರೋಹಣ, ಮೇಯರ್ ಸುವರ್ಣಾ ಶಂಕರ್ ನಾಡಧ್ವಜರೋಹಣ ನೆರವೇರಿಸಲಿದ್ದಾರೆ. ಬೆಳಗ್ಗೆ 9ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಎಸ್ಪಿ ಕೆ.ಎಂ.ಶಾಂತರಾಜು ಚಾಲನೆ ನೀಡಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
31ರ ಬೆಳಗ್ಗೆ 10.30ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ.ವಿ.ವಸಂತ್ಕುಮಾರ್ ಸಮ್ಮೇಳನ ಉದ್ಘಾಟಿಸುವರು. ಸಚಿವ ಕೆ.ಎಸ್.ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಜಿಲ್ಲಾ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ವಿಜಯಾ ಶ್ರೀಧರ್ ಭಾಗವಹಿಸಲಿದ್ದಾರೆ ಎಂದರು.
31ರ ಮಧ್ಯಾಹ್ನ 12.30ಕ್ಕೆ ಸಮ್ಮೇಳನದ ಸರ್ವಾಧ್ಯಕ್ಷರ ಬದುಕು ಬರಹ ಗೋಷ್ಠಿ ನಡೆಯಲಿದ್ದು ನಿವೃತ್ತ ಪ್ರಾಚಾರ್ಯ ಡಾ. ಎಂ.ದಯಾಪತಿ ಆಶಯ ಭಾಷಣ ಮಾಡುವರು. ಮಧ್ಯಾಹ್ನ 2ಕ್ಕೆ ಕನ್ನಡ ಸಾಹಿತ್ಯ ಪರಂಪರೆ ಸಾಮಾಜಿಕ ಪ್ರಜ್ಞೆ ವಿಷಯ ಕುರಿತ ಗೋಷ್ಠಿ ನಡೆಯಲಿದೆ. ಸಂಜೆ 4ಕ್ಕೆ ಕವಿಗೋಷ್ಠಿ, 5.15ಕ್ಕೆ ಸನ್ಮಾನ ಮತ್ತು ಗೌರವ ಸಮರ್ಪಣೆ ನಡೆಯಲಿದೆ. ಸಂಜೆ 6.30ಕ್ಕೆ ಅಪೇಕ್ಷ ಮಂಜುನಾಥ್ ತಂಡದವರು ಸಾಂಸ್ಕೃತಿಕ ಸಂಜೆ ನಡೆಸಿಕೊಡಲಿದ್ದಾರೆ ಎಂದರು.
ಜಿಲ್ಲಾ ಕಸಾಪ ಗೌರವ ಉಪಾಧ್ಯಕರಾದ ರುದ್ರಮುನಿ ಸಜ್ಜನ್, ಎಂ.ಎನ್.ಸುಂದರ್ರಾಜ್, ಮಧುಗಣಪತಿ ಮಡೆನೂರು, ಪ್ರಮುಖರಾದ ಹಸನ್ ಬೆಳ್ಳಿಗನೂಡು, ಗೋಪಜ್ಜಿ ನಾಗಪ್ಪ, ಕೆ.ಬಸವನಗೌಡ ಇತರರಿದ್ದರು.