ಗಂಗಾವತಿ: ಸಾಕ್ಷರತೆ ಪ್ರಮಾಣ ಹೆಚ್ಚಳದಿಂದ ದೇಶದ ನಿರೀಕ್ಷಿತ ಅಭಿವೃದ್ಧಿ ಸಾಧ್ಯ. ಅಕ್ಷರ ಪ್ರಮಾಣ ಹೆಚ್ಚಳಕ್ಕೆ ಪ್ರತಿಯೊಬ್ಬರ ಸಹಕಾರ ಪ್ರಮುಖವಾಗಿದೆ ಎಂದು ತಾಲೂಕು ಸಾಕ್ಷರತಾ ಸಮಿತಿ ಮಾಜಿ ಸಂಯೋಜಕ ಹಾಗೂ ಶಿಕ್ಷಕ ಹನುಮಂತಪ್ಪ ಗಿಡ್ಡಿ ಹೇಳಿದರು.
ಇದನ್ನೂ ಓದಿ: ಸಾಕ್ಷರತೆಯಿಂದ ಅಜ್ಞಾನ ದೂರ
ತಾಲೂಕಿನ ಸಂಗಾಪುರ ಸ.ಹಿ.ಪ್ರಾ.ಉನ್ನತೀಕರಿಸಿದ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ 58ನೇ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಮಾತನಾಡಿದರು. 1991ರಲ್ಲಿ ಸಾಕ್ಷರತಾ ಕಾರ್ಯಕ್ರಮ ಶುರುವಾಗಿದ್ದಾಗ ಶೇ.36ರಷ್ಟು ಅಕ್ಷರ ಪ್ರಮಾಣವಿತ್ತು.
ಪ್ರಸ್ತುತ ಶೇ.77ರಷ್ಟಾಗಿದ್ದರೂ, ಇನ್ನೂ ಸಾಧಿಸಬೇಕಿದೆ. ಅನಕ್ಷರಸ್ಥರಲ್ಲೂ ತಮ್ಮ ಮಕ್ಕಳು ವಿದ್ಯಾವಂತರಾಗಬೇಕೆಂಬ ಕನಸಿದ್ದು, ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಾಗಿದೆ.ಶೇ.100ರಷ್ಟು ಸಾಧನೆಗೆ ಪ್ರತಿಯೊಬ್ಬರು ಸಹಕಾರ ಬೇಕು ಎಂದರು.
ಮುಖ್ಯಶಿಕ್ಷಕ ಮೈಲಾರಪ್ಪ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಮಂಜುನಾಥ ವಸದ್, ಶಿಕ್ಷಣ ಸಂಯೋಜಕರಾದ ಯಮನೂರಪ್ಪ , ಸುಮಂಗಳ, ಸಿ.ಎಚ್.ದೇವೇಂದ್ರ, ರಾಮಪ್ಪ, ಎನ್.ಪುಷ್ಪಾವತಿ, ಪದ್ಮಾವತಿ,
ತಾಲೂಕ ಸಾಕ್ಷರತಾ ಸಮಿತಿ ಪ್ರತಿನಿಧಿಗಳಾದ ಹನುಮಂತಪ್ಪ ಡಗ್ಗಿ, ಜಾಕೀರ್ ಹುಸೇನ್ ಖಾದ್ರಿ ಇತರರಿದ್ದರು.