ಜಗಳೂರು: ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲೂಕಿಗೆ ಸಮಗ್ರ ನೀರಾವರಿಯಾಗಬೇಕು. ಹಾಗಾಗಿ, ಪ್ರತಿ ಮನೆಯಿಂದಲೂ ಹೋರಾಟಕ್ಕೆ ಬರಬೇಕು. ಈ ಮೂಲಕ ಸರ್ಕಾರಗಳಿಗೆ ಎಚ್ಚರಿಕೆ ನೀಡಬೇಕು ಎಂದು ಭದ್ರಾ ಮೇಲ್ದಂಡೆ ಹೋರಾಟ ಸಮಿತಿ ತಾಲೂಕು ಕಾರ್ಯದರ್ಶಿ ಓಬಳೇಶ್ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಕ್ಲಬ್ನಲ್ಲಿ ಶುಕ್ರವಾರ ಜಗಳೂರು ಬಂದ್ ಯಶಸ್ವಿ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೋರಾಟ, ಬಂದ್ ಯಶಸ್ವಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಕಳೆದ ಶನಿವಾರ ಹಮ್ಮಿಕೊಂಡಿದ್ದ ಜಗಳೂರು ಬಂದ್ಗೆ ಎಲ್ಲರೂ ಸ್ವಯಂ ಪ್ರೇರಿತರಾಗಿ ಸಹಕಾರ ನೀಡಿದ್ದಾರೆ ಎಂದರು.
ಪ್ರಾಚಾರ್ಯ ನಾಗಲಿಂಗಪ್ಪ ಮಾತನಾಡಿ, ಹೋರಾಟ ನಿಂತ ನೀರಾಗಬಾರದು. ಬಂದ್ ಯಶಸ್ವಿಯಾಯಿತು ಎಂದು ಸುಮ್ಮನೆ ಕುಳಿತರೆ ಸಾಲದು. ಹೋರಾಟ ನಿರಂತರವಾಗಿರಬೇಕಾದರೆ ಜಾಗೃತಿ ಮತ್ತು ಹೋರಾಟದ ರೂಪುರೇಷೆ ಅಗತ್ಯ ಎಂದರು.
ಶಾಸಕರು ಬಂದ್ಗೆ ಸಹಕಾರ ನೀಡಿದ್ದಾರೆ. ಈಗಾಗಲೇ ಮಳೆಗಾಲ ಆರಂಭವಾಗುತ್ತಿದ್ದು, ಎರಡೂ ಯೋಜನೆಗಳ ಪ್ರಾತ್ಯಕ್ಷಿಕೆಯನ್ನು ಸಾರ್ವಜನಿಕರಿಗೆ ತೋರಿಸುವ ಕಾರ್ಯಕ್ಕೆ ಆಯಾ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ಕಾಮಗಾರಿ ಪ್ರಗತಿ ಎಷ್ಟಾಗಿದೆ ಎಂದು ಬಹಿರಂಗಪಡಿಸಬೇಕು. ಈ ಮಳೆಗಾಲ ಮುಗಿಯುವುದರೊಳಗೆ 57 ಕೆರೆಗಳಿಗೆ ನೀರು ಹರಿಸಿದರೆ ಬರದ ನಾಡು ಹಸಿರು ಆಗುತ್ತದೆ ಎಂದರು.
ವಾಲಿಬಾಲ್ ತಿಮ್ಮಾರೆಡ್ಡಿ, ರೈತ ಮುಖಂಡರಾದ ಗಡಿಮಾಕುಂಟೆ ಬಸವರಾಜಪ್ಪ, ಚಿರಂಜೀವಿ, ಜಿಪಂ ಮಾಜಿ ಸದಸ್ಯ ಸಿ. ಲಕ್ಷ್ಮಣ, ನಿವೃತ್ತ ಉಪನ್ಯಾಸಕ ರಾಜಪ್ಪ, ಎಂ.ಆರ್. ಪುಟ್ಟಣ್ಣ, ಗೌರಿಪುರ ಸತ್ಯಮೂರ್ತಿ, ಇಂದಿರಮ್ಮ, ಕಲ್ಲೇದೇವರಪುರ ಕೆ.ಟಿ. ವೀರಸ್ವಾಮಿ, ರೈತ ಮುಖಂಡರಾದ ಉಜ್ಜನಗೌಡ, ಬೈರನಾಯಕನಹಳ್ಳಿ ರಾಜು, ರಂಗನಾಥ ರೆಡ್ಡಿ, ಭರಮಸಮುದ್ರ ಗುರುಸಿದ್ದಪ್ಪ, ಗೌರಮ್ಮನಹಳ್ಳಿ ತ್ಯಾಗರಾಜ್, ಗಂಗಾಧರಪ್ಪ ಮತ್ತಿತರರಿದ್ದರು.