ಲಿಂಗಸುಗೂರು: ತಾಲೂಕಿನ ಗುಂಡಸಾಗರ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ರುದ್ರಭೂಮಿ ಮಂಜೂರು ಮಾಡಲು ಒತ್ತಾಯಿಸಿ ದಲಿತ ಸಂರಕ್ಷ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಎಸಿ ಅವಿನಾಶ ಶಿಂಧೆಗೆ ಗುರುವಾರ ಮನವಿ ಸಲ್ಲಿಸಿದರು.
ಗುಂಡಸಾಗರ ಶಿವಾರದ ಜಮೀನಿನಲ್ಲಿ ಕಳೆದ ಐದು ದಶಕಗಳಿಂದ ದಲಿತ ಸಮುದಾಯ ಶವಸಂಸ್ಕಾರ ಮಾಡುತ್ತಿದ್ದಾರೆ. ಈಗ ರುದ್ರಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದು, ಶವಸಂಸ್ಕಾರ ಮಾಡಲು ವಿರೋಧಿಸಲಾಗುತ್ತಿದೆ. ದಲಿತ ಸಮುದಾಯದ ಕುಟುಂಬದಲ್ಲಿ ಯಾರಾದರೂ ಮೃತ ಪಟ್ಟರೆ ಶವಸಂಸ್ಕಾರಕ್ಕೆ ಜಾಗವಿಲ್ಲದಂತಾಗಿದೆ. ಗ್ರಾಮದ ಕಲುಷಿತ ನೀರು ಮತ್ತು ಮಳೆ ನೀರು ದಲಿತ ಕೇರಿಯಲ್ಲಿ ಸಂಗ್ರಹವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಸ್ಯೆಗಳ ಕುರಿತು ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಕೂಡಲೇ ದಲಿತ ಸಮುದಾಯಕ್ಕೆ ರುದ್ರಭೂಮಿ ಮಂಜೂರು ಮಾಡಬೇಕು. ದಲಿತ ಕೇರಿಯಲ್ಲಿ ಕಲುಷಿತ ನೀರು ಸಂಗ್ರಹವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.