ಕೊಳ್ಳೇಗಾಲ: ತಾಲೂಕಿನ ಕುಂತೂರು ಬೆಟ್ಟದ ಸಮೀಪವಿರುವ ಸಿಲ್ಕಲ್ಪುರ ಗ್ರಾಮದ ಬಳಿ ಚಿರತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ವಿಚಾರ ತಿಳಿದ ಅರಣ್ಯ ಇಲಾಖೆ ಸೋಮವಾರ ಚಿರತೆ ಸೆರೆಗೆ ಬೋನ್ ಇರಿಸಿದೆ.
ಶನಿವಾರ ರಾತ್ರಿ ಕುಂತೂರು ಬೆಟ್ಟದ ರಸ್ತೆ ಮಾರ್ಗವಾಗಿ ಸಿಲ್ಕಲ್ಪುರಕ್ಕೆ ರಾಜಶೇಖರ್ ಹಾಗೂ ಆತನ ಸಹೋದರ ರಾಜೇಂದ್ರ ಬೈಕ್ನಲ್ಲಿ ತೆರಳುತ್ತಿದ್ದಾಗ ಚಿರತೆ ರಸ್ತೆಯನ್ನು ದಾಟಿದೆ. ಇದ್ದರಿಂದ ಆತಂಕಗೊಂಡ ಬೈಕ್ ಸವಾರರು ಚಿರತೆ ಕಾಣಿಸಿಕೊಂಡ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.
ಇದೀಗ ಸಿಲ್ಕಲ್ಪುರ, ಕುಂತೂರು ಅಕ್ಕ-ಪಕ್ಕದ ಗ್ರಾಮದ ಜನರಿಗೆ ಆತಂಕ ಸೃಷ್ಟಿಯಾಗಿದೆ. ರಾತ್ರಿ ವೇಳೆ ಕುಂತೂರು ಬೆಟ್ಟದ ರಸ್ತೆಯ ಮಾರ್ಗವಾಗಿ ಸಂಚರಿಸಲು ಜನರು ಭಯ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಭಾನುವಾರ ಸಂಜೆಯಿಂದಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಕಾಣಿಸಿಕೊಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ಗ್ರಾಮಸ್ಥರು ಮೊದಲು ಚಿರತೆ ಸೆರೆಗೆ ಬೋನ್ ಇಡುವಂತೆ ಆಗ್ರಹಿಸಿದ್ದರು. ಹೀಗಾಗಿ ಸೋಮವಾರ ಅರಣ್ಯ ಸಿಬ್ಬಂದಿ ಸಿಲ್ಕಲ್ಪುರ ಸಮೀಪದ ಜಮೀನೊಂದರಲ್ಲಿ ಬೋನ್ ಇರಿಸಿದ್ದಾರೆ.
ಚಿರತೆ ಸೆರೆಗೆ ಕ್ರಮ ಕೈಗೊಳ್ಳಲಾಗಿದೆ. ಸಿಲ್ಕಲ್ಪುರ ಗ್ರಾಮದ ಜಮೀನೊಂದರಲ್ಲಿ ಬೋನ್ ಅಳವಡಿಸಲಾಗಿದೆ. ಚಿರತೆ ಚಲನವಲನ ಬಗ್ಗೆ ನಿಗವಹಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಡಿಆರ್ಎಫ್ಒ ದೀಪಕ್ ಮಾಹಿತಿ ನೀಡಿದ್ದಾರೆ.