ಕುರುಗೋಡು: ಕುಡಿವ ನೀರಿನ ಕೆರೆ ಸ್ವಚ್ಛತೆ, ದುರಸ್ತಿಗೆ ಆಗ್ರಹಿಸಿ ಪಟ್ಟಣದಲ್ಲಿ ಎಐಕೆಕೆಎಂಎಸ್ ರೈತ ಸಂಘಟನೆ ನೇತೃತ್ವದಲ್ಲಿ ಕಲ್ಲುಕಂಬ, ಕೆರೆಕೆರೆ, ಲಕ್ಷ್ಮೀಪುರ ಮತ್ತು ಶ್ರೀನಿವಾಸ್ ಕ್ಯಾಂಪ್ ನಿವಾಸಿಗಳು ಗುರುವಾರ ಪ್ರತಿಭಟನೆ ನಡೆಯಿತು.
ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ್ ಮಾತನಾಡಿ, ತಾಲೂಕಿನ ಈ ನಾಲ್ಕು ಗ್ರಾಮದ ಜನರಿಗೆ ಕುಡಿವ ನೀರಿನ ಮೂಲವಾದ ಕೆರೆ ಸೂಕ್ತ ನಿರ್ವಹಣೆ ಇಲ್ಲದೆ ಕಲುಷಿತಗೊಂಡಿದ್ದು, ಶುದ್ಧ ಜಲಕ್ಕಾಗಿ ಪರದಾಡುವಂತಾಗಿದೆ.
ಸ್ಥಳೀಯ ಆಡಳಿತ ಕಳೆದ ಮೂರ್ನಾಲ್ಕು ವರ್ಷಗಳಿಂದ ಕೆರೆಯ ನಿರ್ವಹಣೆ ಮರೆತಿದ್ದು, ನೀರು ಕುಡಿಯಲು ಅಲ್ಲ ಬಳಸಲೂ ಯೋಗ್ಯವಿಲ್ಲದಂತಾಗಿದೆ. ಈ ಹಿಂದೆ ಕಲ್ಲುಕಂಬ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿತ್ತು. ಡಿಸಿ ಗ್ರಾಮವಾಸ್ತವ್ಯ ಮಾಡಿದಾಗಲೂ ಅವರ ಗಮನಕ್ಕೆ ತರಲಾಗಿತ್ತು. ಆದರೆ, ಈವರೆಗೆ ಯಾವುದೇ ಕ್ರಮವಹಿಸಿಲ್ಲ ಎಂದು ದೂರಿದರು.
ಜಿಲ್ಲಾ ಕಾರ್ಯದರ್ಶಿ ಗುರಳ್ಳಿರಾಜ ಮಾತನಾಡಿ, ಕೆರೆಯು ದನಗಳು ಮತ್ತು ಪ್ರಾಣಿ-ಪಕ್ಷಿಗಳ ವಾಸಸ್ಥಳವಾಗಿದೆ. ಕುಡಿವ ನೀರಿಗಾಗಿ ನಾಲ್ಕು ಗ್ರಾಮಗಳು ಜನರು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಹೋರಾಟ ಮಾಡಿದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಕೆರೆ ನೀರು ಕಲುಷಿತವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಸ್ವಚ್ಛತೆಗೆ ತ್ವರಿತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಾಪಂ ಇಒ ಕೆ.ವಿ.ನಿರ್ಮಲಾ ಮಾತನಾಡಿ, ಕೆರೆಗೆ ಭೇಟಿ ನೀಡಿ, ಪರಿಶೀಲಿಸಲಾಗುವುದು. ನರೇಗಾ ಯೋಜನೆಯಡಿ ಹೂಳು ತೆರವುಗೊಳಿಸಲಾಗುವುದು. ಕೆಟ್ಟಿರುವ ಫಿಲ್ಟರ್ ಯಂತ್ರವನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ರೈತ ಮುಖಂಡರಾದ ಕಲ್ಲುಕಂಬ ಪಂಪಾಪತಿ, ನಿಂಗಪ್ಪ, ಬಸವರಾಜ್, ರೈತರಾದ ರಮೇಶ್, ಡಿ.ಕಾಳಿಂಗಪ್ಪ, ಬಸವರಾಜ್ ಎಸ್, ವಿ.ಎಂ.ಗಾದಿ, ಕೆ.ಕರಿಗೂಳಿ, ಹುಲಿರಾಜ್, ರಂಗಮ್ಮ, ಈರಮ್ಮ, ಅಂಜಿನಮ್ಮ, ಲಲಿತಮ್ಮ, ಶಿವಪ್ಪ, ದ್ಯಾವಣ್ಣ ಇದ್ದರು.