ಕುಕನೂರು: ಹಿಂದಿನ ಬಿಜೆಪಿ ಸರ್ಕಾರ ಪಟ್ಟಣದಲ್ಲಿ ತಹಸಿಲ್ ಕಚೇರಿ ನಿರ್ಮಾಣಕ್ಕೆ 9.95 ಕೋಟಿ ರೂ. ಮಂಜೂರಾತಿ ಆದೇಶ ಹೊರಡಿಸಿದೆ ಹೊರತು ಅನುದಾನ ನೀಡಿಲ್ಲ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ವಿಜಯವಾಣಿ ವರದಿಗಾರಯೊಂದಿಗೆ ದೂರವಾಣಿ ಮೂಲಕ ಮಾತನಾಡಿ, ತಹಸಿಲ್ ಕಚೇರಿ ನಿರ್ಮಾಣಕ್ಕೆ 9.95 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ನೀಡಿ ಹಿಂದಿನ ಬಿಜೆಪಿ ಸರ್ಕಾರ ಆದೇಶ ಹೊರಡಿಸಿದ್ದು, ಈ ಹಣವನ್ನು 2023-24ನೇ ಆರ್ಥಿಕ ಸಾಲಿನ ಹಣಕಾಸು ಲೆಕ್ಕ ಶೀರ್ಷಿಕೆಯಲ್ಲಿ ಸೇರಿಸಿಕೊಳ್ಳಬೇಕೆಂದು ಆದೇಶಿಸುತ್ತಾರೆ. ಸದ್ಯ ಈ ಹಣ ಒದಗಿಸುವ ಹೊರೆ ಸಿಎಂ ಸಿದ್ದರಾಮಯ್ಯ ಸರ್ಕಾರದ ಮೇಲಿದೆ ಎಂದರು.
ಹಿಂದಿನ ಬಿಜೆಪಿ ಸರ್ಕಾರ ಹಣ ನೀಡದೇ ಇರುವುದರಿಂದ ಆಡಳಿತಾತ್ಮಕ ಆದೇಶಕ್ಕೆ ಯಾವುದೇ ಬೆಲೆ ಇಲ್ಲ. ಈಗ ನಾನು ಹಣ ಮಂಜೂರಾತಿ ಮಾಡಿಸಿ ಕಾಮಗಾರಿ ಪ್ರಾರಂಭಿಸಬೇಕಾಗಿದೆ. ಕೇವಲ ಪ್ರಚಾರಕ್ಕಾಗಿ ಇಂತಹ ಕೆಲಸ ಮಾಡಬಾರದು.
ತಹಸಿಲ್ ಕಚೇರಿ ನಿರ್ಮಾಣಕ್ಕೆ ಆಡಳಿತಾತ್ಮಕ ಆದೇಶವಾದಾಗ ಆರ್ಥಿಕ ವರ್ಷ 2022-23 ಆಗಿರುತ್ತದೆ. 2023-24ನೇ ವರ್ಷವೆಂದರೆ 1-4-2023 ಪ್ರಾರಂಭವಾಗುತ್ತದೆ. ಆ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆ ಪ್ರಾರಂಭವಾಗಿದ್ದು, ನೀತಿ ಸಂಹಿತೆ ಜಾರಿಯಾಗಿದ್ದರಿಂದ ಹಣ ನೀಡಲು ಬರುವುದಿಲ್ಲ ಎಂದು ತಿಳಿಸಿದರು.
ತಹಸಿಲ್ದಾರ್ ಕಚೇರಿ ನಿರ್ಮಾಣಕ್ಕೆ 9 ಎಕರೆ ಜಮೀನು ಸರ್ವೇ ನಂಬರ್ 280/3-4 ಹಾಗೂ 267ರ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸರ್ಕಾರಕ್ಕೆ ಯಲಬುರ್ಗಾ ಎಇಇ, ಪಿಡಬ್ಲುೃಡಿ ಇಇ ಕೊಪ್ಪಳ ವರದಿ ನೀಡಿರುತ್ತಾರೆ. ಆದರೆ ತಹಸಿಲ್ ಕಚೇರಿ ನಿರ್ಮಾಣಕ್ಕೆ ಭೂಮಿಯನ್ನು ಜಿಲ್ಲಾಧಿಕಾರಿ ಇದುವರೆಗೂ ವಶಪಡಿಸಿಕೊಂಡಿಲ್ಲ.
ಭೂಮಿ ವಶಪಡಿಸಿಕೊಳ್ಳಲು ಬೇಕಾದ ಪೂರ್ತಿ ಹಣ ಹಿಂದಿನ ಸರ್ಕಾರ ನೀಡಿಲ್ಲ ಮತ್ತು ಭೂ ಮಾಲೀಕರು ಹೈಕೋರ್ಟ್ನಲ್ಲಿ ಭೂಮಿಯನ್ನು ವಶಪಡಿಸಿಕೊಳ್ಳದಂತೆ ದಾವೆ ಹೂಡಿದ್ದಾರೆ. ತಹಸಿಲ್ ಕಚೇರಿ ಕಟ್ಟಡಕ್ಕೆ ಹಣ ನೀಡದೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಮಾಜಿ ಸಚಿವ ಹಾಲಪ್ಪ ಆಚಾರ್ ಆಡಳಿತಾತ್ಮಕ ಮಂಜೂರಾತಿ ಕೊಡಿಸಿದ್ದಾರೆ ಎಂದು ಆರೋಪಿಸಿದರು.