ಮುಂಬೈ: ಡ್ರಗ್ಸ್ ಜಾಲದಲ್ಲಿ ಸಿಕ್ಕಿಬಿದ್ದಿರುವ ಧರ್ಮ ಎಂಟರ್ಟೈನ್ಮೆಂಟ್ ಸಂಸ್ಥೆಯ ಮಾಜಿ ಉದ್ಯೋಗಿ ಕ್ಷಿತಿಜ್ ಪ್ರಸಾದ್ ಹೊಸ ಬಾಂಬ್ ಸಿಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಡ್ರಗ್ಸ್ ಜಾಲದಲ್ಲಿ ಕರಣ್ ಜೋಹರ್ ಅವರ ಹೆಸರನ್ನು ಹೇಳಿದರೆ, ಬಿಟ್ಟುಬಿಡ್ತೀವಿ ಎಂದು ಎನ್ಸಿಬಿ ಅಧಿಕಾರಿಗಳು ತಮ್ಮ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನ್ಯಾಯ ಸಿಕ್ಕಿಲ್ಲ ಅಂತ ನಟ ಸುಶಾಂತ್ ಗೆಳೆಯರ ಗಾಂಧಿಗಿರಿ, ಅ. 2ರಂದೇ ಹಿಡಿಯಲಿದ್ದಾರೆ ಆ ದಾರಿ…
ಡ್ರಗ್ಸ್ ಜಾಲದ ಸಂಬಂಧ ಎನ್ಸಿಬಿ ಅಧಿಕಾರಿಗಳು, ಕರಣ್ ಜೋಹರ್ ಒಡೆತನದ ಧರ್ಮ ಎಂಟರ್ಟೈನ್ಮೆಂಟ್ ಸಂಸ್ಥೆಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಕ್ಷಿತಿಜ್ ಪ್ರಸಾದ್ ಮತ್ತು ಅನುಭವ್ ಚೋಪ್ರಾ ಎಂಬುವವರನ್ನು ಅರೆಸ್ಟ್ ಮಾಡಿದ್ದರು. ಅವರಿಬ್ಬರನ್ನು ಒಮ್ಮೆ ವಿಚಾರಣೆಗೂ ಒಳಪಡಿಸಿದ್ದರು.
ಈ ವಿಷಯವಾಗಿ ಮಾತನಾಡಿದ್ದ ಕರಣ್ ಜೋಹರ್, ತಮ್ಮ ಸಂಸ್ಥೆಗೂ ಮತ್ತು ಬಂಧಿತರಾಗಿರುವ ಕ್ಷಿತಿಜ್ ಮತ್ತು ಅನುಭವ್ ನಡುವೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದರು. ಬಹಳ ವರ್ಷಗಳ ಹಿಂದೆಯೇ ಅವರಿಬ್ಬರೂ ತಮ್ಮ ಸಂಸ್ಥೆಯನ್ನು ಬಿಟ್ಟು ಹೋಗಿದ್ದು, ಆ ನಂತರ ಅವರೇನೇ ಮಾಡಿದರೂ ಸಂಸ್ಥೆ ಅದಕ್ಕೆ ಜವಾಬ್ದಾರಿಯಲ್ಲ ಎಂದು ಹೇಳಿದ್ದರು.
ಈ ಕುರಿತು ಮುಂಬೈ ಕೋರ್ಟ್ಗೆ ವರದಿ ಸಲ್ಲಿಸಿರುವ ಕ್ಷಿತಿಜ್ ಪ್ರಸಾದ್ ಅವರ ವಕೀಲರಾದ ಸತೀಶ್ ಮಾನೆಶಿಂಧೆ, ಎನ್ಸಿಬಿ ಅಧಿಕಾರಿಗಳು ತಮ್ಮ ಕಕ್ಷಿದಾರನ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಕೇಸ್ನಲ್ಲಿ ಕರಣ್ ಜೋಹರ್, ಸೋಮೆಲ್ ಮಿಶ್ರ, ರಾಖಿ, ಅಪೂರ್ವ ಮೆಹ್ತಾ, ನೀರಜ್ ಮುಂತಾದವರ ಹೆಸರನ್ನು ಹೇಳಿದರೆ, ನನ್ನ ಕಕ್ಷಿದಾರರನ್ನು ಬಿಟ್ಟುಬಿಡುವುದಾಗಿ ಒತ್ತಡ ತಂದಿದ್ದು, ಕ್ಷಿತಿಜ್ ಈ ಒತ್ತಡಕ್ಕೆ ಮಣಿಯಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಡ್ರಗ್ಸ್’ ನಟಿಯರ ನಿರೀಕ್ಷೆ ಹುಸಿ; ಅಳುತ್ತ, ಜೈಲು ಅಧಿಕಾರಿಗಳಿಗೆ ಕೈಮುಗಿಯುತ್ತಿರುವ ರಾಗಿಣಿ, ಸಂಜನಾ
ಇನ್ನು, ಕಳೆದ ವರ್ಷ ಜುಲೈ 28ರಂದು ಕರಣ್ ಜೋಹರ್ ನೀಡಿದ ಪಾರ್ಟಿಯಲ್ಲಿ ಬಾಲಿವುಡ್ ನಟ-ನಟಿಯರು ಡ್ರಗ್ಸ್ ತೆಗೆದುಕೊಂಡಿದ್ದರು ಎಂಬ ಸುದ್ದಿಯೊಂದು ಕೇಳಿ ಬಂದಿತ್ತು. ಈ ಕುರಿತು ಮಾತನಾಡಿರುವ ಕರಣ್ ಜೋಹರ್, ‘ಮಾಧ್ಯಮಗಳಲ್ಲಿ ಸುಳ್ಳುಸುದ್ದಿ ಪ್ರಸಾರಾಗುತ್ತಿರುವುದರಿಂದ ನನ್ನ ಬಗ್ಗೆ, ನನ್ನ ಪ್ರೊಡಕ್ಷನ್ ಕಂಪೆನಿಯ ಬಗ್ಗೆ ಜನರಲ್ಲಿ ಅಸಹನೆ ಹೆಚ್ಚುತ್ತಿದೆ. ಈ ಕುರಿತಾಗಿ ಒಂದು ವಿಷಯವನ್ನು ಸ್ಪಷ್ಟಪಡಿಸುವುದಕ್ಕೆ ಬಯಸುತ್ತೇನೆ. ನಾನು ಯಾವತ್ತೂ ಡ್ರಗ್ಸ್ ತೆಗೆದುಕೊಂಡಿಲ್ಲ ಮತ್ತು ಡ್ರಗ್ಸ್ ತೆಗೆದುಕೊಳ್ಳುವುದನ್ನು ಪ್ರೋತ್ಸಾಹಿಸುವುದೂ ಇಲ್ಲ’ ಎಂದು ಅವರು ಹೇಳಿದ್ದಾರೆ.
ಜ್ಯೋತಿಷ್ಯಕ್ಕಿಂತ ನಿಮ್ಮನ್ನು ನೀವು ನಂಬಿ … ಜಗ್ಗೇಶ್ ಹಾಗೆ ಹೇಳಿದ್ದ್ಯಾಕೆ?