ಮುಂಬೈ: ಎಸ್.ಎಸ್. ರಾಜಮೌಳಿ, ತಮ್ಮ ಮಹತ್ವಾಕಾಂಕ್ಷೆಯ ಚಿತ್ರವಾದ ‘ಬಾಹುಬಲಿ’ಯನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಬೇಕು, ಹಿಂದಿಗೆ ಡಬ್ ಮಾಡಬೇಕು ಎಂದು ಹೊರಟಾಗ, ಅವರಿಗೆ ನೆರವಾದರು ಬಾಲಿವುಡ್ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್. ‘ಬಾಹುಬಲಿ’ ಚಿತ್ರದ ಎರಡೂ ಭಾಗಗಳ ಹಿಂದಿ ಅವತರಣಿಕೆಯನ್ನು ಉತ್ತರ ಭಾರತದಲ್ಲಿ ಬಿಡುಗಡೆ ಮಾಡಿದ ಅವರು, ಅದರಿಂದ ನೂರಾರು ಕೋಟಿ ರೂ.ಗಳನ್ನು ಸಂಪಾದಿಸಿದರು.
ಇದನ್ನೂ ಓದಿ: ಬಾಲಿವುಡ್ ನಟಿ ರಾಖಿ ಸಾವಂತ್ ಬಂಧನ; ಯಾಕೆ ಗೊತ್ತಾ?
ಆದರೆ, ಆ ನಂತರ ತಮ್ಮ ‘RRR’ ಚಿತ್ರದ ಡಬ್ಬಿಂಗ್ ಹಕ್ಕುಗಳನ್ನು ರಾಜಮೌಳಿ, ಕರಣ್ಗೆ ಕೊಡಲಿಲ್ಲ. ಅದರ ಬದಲು ಪೆನ್ ಮೂವೀಸ್ನ ಜಯಂತಿಲಾಲ್ ಗಾಢ ಅವರಿಗೆ ಕೊಟ್ಟರು. ಆಗ ‘ಬಾಹುಬಲಿ’ ಚಿತ್ರದ ಹಕ್ಕುಗಳನ್ನು ಕೊಟ್ಟ ರಾಜಮೌಳಿ, ಈಗ್ಯಾಕೆ ಕೊಡಲಿಲ್ಲ ಎಂಬ ಪ್ರಶ್ನೆ ಸಹ. ಅದಕ್ಕೆ ರಾಜಮೌಳಿ ಅವರೇ ಕೆಲವು ತಿಂಗಳ ಹಿಂದೆ ನಡೆದ ಸಮಾರಂಭದಲ್ಲಿ ಉತ್ತರಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ‘ನೀವು ‘ಬಾಹುಬಲಿ’ ಚಿತ್ರದಿಂದ ನೂರಾರು ಕೋಟಿ ರೂಪಾಯಿಗಳನ್ನು ಮಾಡಿಕೊಂಡಿರಿ. ಅದರಿಂದ ನನಗೇನು ಸಿಕ್ಕಿತು. ನಿಮ್ಮ ಟಿವಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದೆ. ಒಂದು ಫೋನ್ ಮತ್ತು ಬ್ಲೂಟೂಥ್ ಸ್ಪೀಕರ್ನ್ನು ಉಡುಗೊರೆಯಾಗಿ ಕೊಟ್ಟು, ಈಗ ‘RRR’ ಚಿತ್ರದ ಹಕ್ಕುಗಳನ್ನು ಕೇಳುತ್ತಿದ್ದೀರಾ? ಅದೇ ಜಯಂತಿ ಲಾಲ್ ಗಾಢ ಅವರನ್ನು ನೋಡಿ ಅವರು, ಮುಂಬೈನ ಬಾಂದ್ರದಲ್ಲಿ ಸಮುದ್ರದ ಎದುರಿಗಿರುವ ನಿಮ್ಮ ಫ್ಲಾಟ್ ಪಕ್ಕದಲ್ಲೇ ನನಗೊಂದು ಫ್ಲಾಟ್ ಕೊಡುವುದಾಗಿ ಹೇಳಿದ್ದಾರೆ. ಇನ್ನು, ನಮ್ಮ ‘RRR’ ಚಿತ್ರದ ನಿರ್ಮಾಪಕ ದಾನಯ್ಯ ಅವರಂತೂ ಚಿತ್ರ ಗೆದ್ದರೆ, ಹೈದರಾಬಾದ್ನ ಜ್ಯೂಬಿಲಿ ಹಿಲ್ಸ್ನಲ್ಲಿ ಒಂದು ಎಕರೆ ಕೊಡುವುದಾಗಿ ಹೇಳಿದ್ದಾರೆ. ನೀವೇನು ಕೊಡುತ್ತೀರಿ?’ ಎಂದು ತಮಾಷೆಯಾಗಿಯೇ ಪ್ರಶ್ನಿಸಿದ್ದಾರೆ ರಾಜಮೌಳಿ.
ಇದನ್ನೂ ಓದಿ: ಅಪ್ಪ-ಅಮ್ಮನ ಸಮಾಧಿ ಬಳಿ ‘ದುನಿಯಾ’ ವಿಜಯ್ ಹುಟ್ಟುಹಬ್ಬ
ರಾಜಮೌಳಿ ಇಷ್ಟೆಲ್ಲ ಮಾತನಾಡಿದ್ದು ಸ್ನೇಹದಿಂದಲೇ ಹೊರತು ಬೇರೆ ಯಾವುದೇ ಕಾರಣಕ್ಕಲ್ಲ. ಕರಣ್ ಜೋಹರ್ ಮತ್ತು ರಾಜಮೌಳಿ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದು, ಕರಣ್ ಜೋಹರ್ ನಿರ್ಮಾಣದ ‘ಬ್ರಹ್ಮಾಸ್ತ್ರ’ ಚಿತ್ರದ ತೆಲುಗು ಅವತರಣಿಕೆಯನ್ನು ರಾಜಮೌಳಿ ಅರ್ಪಿಸಿದ್ದರು.