ಬಳ್ಳಾರಿ: ನಗರದ ಶ್ರೀ ಜಗದ್ಗುರು ಕೊಟ್ಟೂರು ಮಠದಲ್ಲಿ ಡಿ.5ರಂದು ಲಿಂ. ಸಂಗನಬಸವ ಶ್ರೀಗಳ ಪ್ರಥಮ ಪುಣ್ಯಸ್ಮರಣೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಕಾರ್ಯದರ್ಶಿ ಬಸವರಾಜಸ್ವಾಮಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಯಕಯೋಗಿ ಸಂಗನಬಸವ ಶ್ರೀಗಳು ಎಲ್ಲ ಸಮುದಾಯದ ಬೆಳವಣಿಗೆಗೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಹಗಲು ರಾತ್ರಿ ಎನ್ನದೆ ದುಡಿದರು. ಅವರನ್ನು ಕಳೆದುಕೊಂಡು ನಾಡು ಬಡವಾಗಿದೆ. ಮಠದಲ್ಲಿ ಡಿ.5ರಂದು ಅವರ ಪುಣ್ಯಸ್ಮರಣೆ ಆಯೋಜಿಸಿದ್ದು, ಮುಪ್ಪಿನ ಬಸವಲಿಂಗ ಸ್ವಾಮೀಜಿ, ವಳಬಳ್ಳಾರಿಯ ಸಿದ್ಧಲಿಂಗ ಸ್ವಾಮೀಜಿ, ಉರವಕೊಂಡ ಡಾ.ಕರಿಬಸವ ಸ್ವಾಮೀಜಿ, ಸಂತೆಕಲ್ಲೂರು ಗುರುಬಸವ ಸ್ವಾಮೀಜಿ ಹಾಗೂ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮುಖಂಡ ಪುರುಷೋತ್ತಮ ಗೌಡ ಮಾತನಾಡಿ, ಶ್ರೀಗಳು ಹಾಲಕೆರೆಗೆ ಸೀಮಿತವಾಗದೆ ಬಳ್ಳಾರಿ, ಹೊಸಪೇಟೆ ಭಾಗಗಳಲ್ಲಿ ಶಾಖಾ ಮಠಗಳನ್ನು ಸ್ಥಾಪಿಸಿದರು. ದುಸ್ಥಿತಿಗೆ ತಲುಪಿದ್ದ ಮಠಗಳನ್ನು ಜೀರ್ಣೋದ್ಧಾರ ಮಾಡಿ, ಅರ್ಥಿಕ ಅಭಿವೃದ್ಧಿಯತ್ತ ಕೊಂಡೊಯ್ದ ಶ್ರೇಯಸ್ಸು ಸ್ವಾಮೀಜಿಗೆ ಸಲ್ಲುತ್ತದೆ. ಗಡಿಭಾಗದಲ್ಲಿ ಹಲವು ಕನ್ನಡ ಶಾಲೆಗಳನ್ನು ನಿರ್ಮಿಸಿ ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಈಗಾಗಲೇ ಹಾಲಕೆರೆ ಹೊಸಪೇಟೆಯಲ್ಲಿ ಪ್ರಥಮ ಪುಣ್ಯಸ್ಮರಣೆ ಮಾಡಲಾಗಿದೆ. ಅದೇರೀತಿ ಬಳ್ಳಾರಿಯಲ್ಲಿ ಶ್ರೀಗಳ ಮೊದಲ ಪುಣ್ಯಸ್ಮರಣೆ ನಡೆಯಲಿದೆ ಎಂದರು. ಮುಖಂಡರಾದ ಹೊನ್ನಳ್ಳಿಗೌಡ, ದಿವಾಕರ್ ಗೌಡ, ರಾಜಶೇಖರ, ಪುಟ್ಟಸ್ವಾಮಿ, ಗಂಗಾವತಿ ವೀರೇಶ್, ವನಜಾಕ್ಷಿ, ಶಾಂತಮ್ಮ ಇತರರಿದ್ದರು.