ಬೆಂಗಳೂರು: ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾ ಬಾಕ್ಸ್ಆಫೀಸ್ನಲ್ಲಿ ಭರ್ಜರಿ ಸೌಂಡ್ ಮಾಡುತ್ತಿದೆ. ನಾನ್ ಪ್ಯಾನ್ ಇಂಡಿಯಾ ಸಿನಿಮಾವೊಂದು ಗಲ್ಲಾಪೆಟ್ಟಿಗೆಯಲ್ಲಿ 150 ಕೋಟಿ ರೂ. ಗಳಿಕೆಯತ್ತ ಮುನ್ನುಗ್ಗುತ್ತಿದೆ. ಈ ಮೂಲಕ ದರ್ಶನ್ ಅವರು ಬಾಕ್ಸ್ ಆಫೀಸ್ ಸುಲ್ತಾನ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
1970 ಮತ್ತು 80ರ ದಶಕದಲ್ಲಿನ ಜಮಿನ್ದಾರ ಹಾಗೂ ಜಾತಿ ಪದ್ಧತಿ ಆಧಾರಿತ ಸಿನಿಮಾವನ್ನು ಇಡೀ ರಾಜ್ಯವೇ ಒಪ್ಪಿ, ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕಾಟೇರ ಸಿನಿಮಾದ ಸೆಲೆಬ್ರಿಟಿ ಶೋ ಸಹ ಏರ್ಪಡಿಸಲಾಗಿತ್ತು. ಈ ವೇಳೆ ಉಪೇಂದ್ರ, ಶ್ರೀಮುರುಳಿ, ನೀನಾಸಂ ಸತೀಶ್, ಡಾಲಿ ಧನಂಜಯ್ ಹಾಗೂ ನೆನಪಿರಲಿ ಪ್ರೇಮ್ ಸೇರಿದಂತೆ ಸ್ಯಾಂಡಲ್ವುಡ್ನ ಕಲಾವಿದರು ಸಿನಿಮಾ ವೀಕ್ಷಣೆ ಮಾಡಿ ಮೆಚ್ಚಿಕೊಂಡರು.
ಸುದೀಪ್ ಮತ್ತು ದರ್ಶನ್ ಬಗ್ಗೆ ಹೇಳಬೇಕಿಲ್ಲ. ಒಂದು ಕಾಲದಲ್ಲಿ ಸ್ಯಾಂಡಲ್ವುಡ್ನಲ್ಲಿ ಕುಚಿಕು ಗೆಳೆಯರಂತಿದ್ದ ಇಬ್ಬರು ಕಾರಣಾಂತರಗಳಿಂದ ದೂರವಾಗಿದ್ದಾರೆ. ಇದರ ಬಗ್ಗೆ ಕೇಳಿದಾಗಲೆಲ್ಲ ಅಭಿಮಾನಿಗಳಲ್ಲಿ ಬೇಸರ ಉಂಟಾಗುತ್ತದೆ. ಆದರೆ, ಇತ್ತೀಚಿಗೆ ಸುದೀಪ್ ಮತ್ತು ದರ್ಶನ್ ಮತ್ತೆ ಒಂದಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಸುಮಲತಾ ಅಂಬರೀಷ್ ಬರ್ತಡೇಯಲ್ಲಿ ಒಂದೇ ವೇದಿಕೆಯಲ್ಲಿ ಇಬ್ಬರು ಕಾಣಿಸಿಕೊಂಡಿದ್ದರು. ಅಲ್ಲದೆ, ನಾವಿಬ್ಬರು ಜಗಳವಾಡಿಲ್ಲ ಎನ್ನುವ ಮೂಲಕ ಸುದೀಪ್, ದರ್ಶನ್ ಬಗ್ಗೆ ಮಾತನಾಡಿದ್ದರು. ದರ್ಶನ್ ಮೇಲೆ ಚಪ್ಪಲಿ ಎಸೆತ ಪ್ರಕರಣದ ವೇಳೆ ಸುದೀಪ್ ಅದನ್ನು ಖಂಡಿಸಿದ್ದರು. ಇದಕ್ಕೆ ದರ್ಶನ್ ಕೂಡ ಧನ್ಯವಾದಗಳನ್ನು ಹೇಳಿದ್ದರು. ಸಂದರ್ಶನದಲ್ಲಿಯೂ ದರ್ಶನ್, ಸುದೀಪ್ ಹೆಸರು ಹೇಳಿದ್ದಾರೆ. ಇದನೆಲ್ಲ ನೋಡಿದರೆ ಕಾಲಾನಂತರದಲ್ಲಿ ಮನಸ್ತಾಪಗಳು ಕರಗಿ ಇಬ್ಬರು ಮತ್ತೆ ಒಂದಾಗುತ್ತಾರೆ ಎಂಬ ಭರವಸೆಯು ಕೂಡ ಅಭಿಮಾನಿಗಳಲ್ಲಿ ಇನ್ನೂ ಜೀವಂತವಾಗಿದೆ.
ಕಾಟೇರ ಬಗ್ಗೆ ಮಾತು
ತಾಜಾ ಸಂಗತಿ ಏನೆಂದರೆ, ಸುದೀಪ್ ಅವರು ಕಾಟೇರ ಸಿನಿಮಾ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ. #AskKichcha ಹ್ಯಾಸ್ಟ್ಯಾಗ್ ಅಡಿಯಲ್ಲಿ ಅಭಿಮಾನಿಗಳ ಜತೆಯಲ್ಲಿ ಸುದೀಪ್ ಸಂವಾದ ನಡೆಸಿದ್ದಾರೆ. ಈ ವೇಳೆ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಕಾಟೇರ ಸಿನಿಮಾವನ್ನು ಯಾವಾಗ ನೋಡ್ತೀರಾ ಎಂದು ಅಭಿಮಾನಿಯೊಬ್ಬ ಪ್ರಶ್ನಿಸಿದ್ದು, ಇದಕ್ಕೆ ಸುದೀಪ್ ನೀಡಿದ ಉತ್ತರ ಅಭಿಮಾನಿಗಳನ್ನು ಗೊಂದಲಕ್ಕೆ ದೂಡಿದೆ.
ಸುದೀಪ್ ಕೊಟ್ಟ ಉತ್ತರವೇನು?
ನಾನು ನೋಡಿಲ್ಲ ಎಂದು ಯಾರೊಬ್ಬರು ನಿಮಗೆ ಹೇಳಿಲ್ಲವೇ ಎನ್ನುವ ಅರ್ಥದಲ್ಲಿ ಸುದೀಪ್ ಹೇಳಿದಂತಿದೆ. ಆದರೆ, ಕಿಚ್ಚ ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬ ಗೊಂದಲ ಮಾತ್ರ ಅಭಿಮಾನಿಗಳಲ್ಲಿ ಹಾಗೇ ಇದೆ. ಇದಕ್ಕೆ ನೀವೊಬ್ಬರೇ ಅರ್ಥ ಹೇಳಲು ಸಾಧ್ಯ ಎಂದು ಫ್ಯಾನ್ಸ್ ಟ್ವೀಟ್ ಮಾಡಿದ್ದಾರೆ. ಸುದೀಪ್ ಸರ್ ಹೇಳಿದ್ದು ಅರ್ಥ ಆಗಲಿಲ್ಲ ಯಾರಾದ್ರೂ ಕನ್ನಡದಲ್ಲಿ ಹೇಳಿ ಎಂದು ಕೇಳಿದ್ದಾರೆ.
Hasnt anyone told you I haven’t already 🥂 https://t.co/GGTkrNVogU
— Kichcha Sudeepa (@KicchaSudeep) January 16, 2024
2017ರ ದರ್ಶನ್ ಟ್ವೀಟ್
2017ರಲ್ಲಿ ದರ್ಶನ್ ಟ್ವೀಟ್ ಮಾಡಿ, ನಾನು ಮತ್ತು ಸುದೀಪ್ ಇನ್ಮುಂದೆ ಸ್ನೇಹಿತರಲ್ಲ. ನಾವಿಬ್ಬರು ಕನ್ನಡ ಇಂಡಸ್ಟ್ರಿಗೆ ದುಡಿಯುವ ನಟರಷ್ಟೆ. ಈ ಬಗ್ಗೆ ಯಾವುದೇ ವದಂತಿ ಹರಡಬೇಡಿ. ಇದು ಇಲ್ಲಿಗೆ ಮುಗಿಯಲಿ ಎಂದಿದ್ದರು. ಈ ಒಂದು ಟ್ವೀಟ್ ಇಡೀ ಕರ್ನಾಟಕದಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಅನೇಕರಿಗೆ ಸಿಡಿಲು ಬಡಿದಂತಾಯಿತು. ಅಷ್ಟು ಚೆನ್ನಾಗಿದ್ದ ಇಬ್ಬರ ನಡುವೆ ಏನು ನಡೆಯಿತು ಎಂಬ ಪ್ರಶ್ನೆ ಇಂದಿಗೂ ಅನೇಕರ ಮನದಲ್ಲಿ ಇಂದಿಗೂ ಉಳಿದಿದೆ.
ಕುಚಿಕು ಗೆಳೆಯರ ಮನಸ್ತಾಪಕ್ಕೆ ಬ್ರೇಕ್! ಸಿಕ್ಕೇ ಬಿಡ್ತು ಕಿಚ್ಚ-ದಚ್ಚು ಮತ್ತೆ ಒಂದಾಗುವ ಮುನ್ಸೂಚನೆ
ಕಿಚ್ಚ-ದಚ್ಚು ಅಭಿಮಾನಿಗಳಿಗೆ ಭಾರಿ ಆಘಾತ ನೀಡಿದ ದಿನವಿದು: ಎಲ್ಲವೂ ಮೊದಲಿನಂತಾಗುವುದೇ?