ಕಾಸರಗೋಡು: ಕೇರಳ ರಸ್ತೆ ಸಾರಿಗೆ ಸಂಸ್ಥೆ ಎದುರಿಸುತ್ತಿದ್ದ ಇಂಧನ ಕೊರತೆಗೆ ತಾತ್ಕಾಲಿಕ ಪರಿಹಾರ ಲಭಿಸಿದೆ. ಖಾಸಗಿ ಪೆಟ್ರೋಲ್ ಬಂಕ್ಗಳಿಂದ ಇಂಧನ ಪಡೆದುಕೊಳ್ಳಲು ಆಯಾ ಡಿಪೋಗಳಿಗೆ ಕೆಎಸ್ಆರ್ಟಿಸಿ ನಿರ್ದೇಶನ ನೀಡಿರುವುದರಿಂದ ಬದಲಿ ವ್ಯವಸ್ಥೆಯ ಮೂಲಕ ಬಸ್ ಸಂಚಾರ ಮರು ಆರಂಭಗೊಂಡಿದೆ.
ಇಂಡಿಯನ್ ಆಯಿಲ್ ಕಾರ್ಪೋರೇಶನ್ಗೆ ಹಣ ಪಾವತಿ ಬಾಕಿಯಿದ್ದ ಕಾರಣ ಕೆಎಸ್ಆರ್ಟಿಸಿಗೆ ತೈಲ ಕಂಪನಿಗಳು ಇಂಧನ ಪೂರೈಕೆ ಸ್ಥಗಿತಗೊಳಿಸಿದ್ದು, ಇದರಿಂದ ಬಹುತೇಕ ಡಿಪೋಗಳಲ್ಲಿ ಬಸ್ ಸಂಚಾರ ಅರ್ಧಕ್ಕರ್ಧ ಸ್ಥಗಿತಗೊಂಡಿತ್ತು. ಕೆಎಸ್ಸಾರ್ಟಿಸಿ ಬಸ್ಗಳಿಗೆ ಡಿಪೋಗಳಿಂದಲೇ ಇಂಧನ ತುಂಬಿಸಿಕೊಳ್ಳಬೇಕೆಂಬ ನಿಬಂಧನೆಯಿದ್ದು, ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕೆಎಸ್ಸಾರ್ಟಿಸಿಗೆ ಇಂಧನ ಪೂರೈಸಿದ ಹಣ ಸಕಾಲಕ್ಕೆ ಪಾವತಿಸಲು ಸಾಧ್ಯವಾಗಿರಲಿಲ್ಲ.
ಕಾಸರಗೋಡು ಡಿಪೋ ಒಂದರಲ್ಲೇ 50 ಲಕ್ಷ ರೂ.ಗಳಿಗೂ ಹೆಚ್ಚು ಮೊತ್ತ ನೀಡಲು ಬಾಕಿಯಿರಿಸಿಕೊಂಡಿದೆ. ಹೊರಗಿನಿಂದ ಇಂಧನ ತುಂಬಿಸಿಕೊಳ್ಳಲು ಅನುಮತಿ ಲಭಿಸುತ್ತಿದ್ದಂತೆ ಕೆಎಸ್ಸಾರ್ಟಿಸಿ ದೈನಂದಿನ ಗಳಿಕೆಯಿಂದ ಇಂಧನ ತುಂಬಿಸಿಕೊಳ್ಳಲಾರಂಭಿಸಿದೆ. ಇದುವರೆಗೆ ಕೆಎಸ್ಸಾರ್ಟಿಸಿ ಡಿಪೋದಲ್ಲಿ ಇಂಧನ ತುಂಬಿಸಿಕೊಳ್ಳುತ್ತಿದ್ದ ಕೆಎಸ್ಆರ್ಟಿಸಿ ಬಸ್ಗಳು ಖಾಸಗಿ ಪೆಟ್ರೋಲ್ಬಂಕ್ ಮುಂದೆ ಸಾಲುಗಟ್ಟಿ ನಿಲ್ಲಲಾರಂಭಿಸಿದೆ.
ಖಾಸಗಿ ಪೆಟ್ರೋಲ್ ಪಂಪುಗಳಿಂದ ಇಂಧನ ಪಡೆದುಕೊಳ್ಳಲು ಕೆಎಸ್ಆರ್ಟಿಸಿ ಅಧಿಕಾರಿಗಳು ಆಯಾ ಡಿಪೋಗಳಿಗೆ ನೀಡಿರುವ ಸೂಚನೆಯನ್ವಯ ಖಾಸಗಿ ಬಂಕ್ಗಳಿಂದ ಇಂಧನ ಪಡೆದುಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡಿನ ಎರಡು ಬಸ್ ಹೊರತುಪಡಿಸಿ ಇತರ ಎಲ್ಲ ಬಸ್ಗಳೂ ಸರ್ವೀಸ್ ಮರು ಆರಂಭಿಸಿದೆ ಎಂದು ಡಿಪೋ ಅಧಿಕಾರಿಗಳು ತಿಳಿಸಿದ್ದಾರೆ.