ಬೆಂಗಳೂರು: ಸಬ್ ರಿಜಿಸ್ಟ್ರಾರ್ ಕಚೇರಿಯ ‘ಕಾವೇರಿ 2.0’ ತಂತ್ರಾಂಶದಲ್ಲಿ ಸಮಸ್ಯೆ ಉಂಟಾಗಿದ್ದು, ಜನರಿಗೆ ಅನುಕೂಲ ಆಗುವಂತೆ ಕಚೇರಿ ಸಮಯ ವಿಸ್ತರಣೆ ಮಾಡಲಾಗಿತ್ತು. ಆದರೆ ಕಾವೇರಿ ಸರ್ವರ್ನಲ್ಲಿ ದೋಷ ಕಂಡುಬಂದಿದೆ. ಪರಿಣಾಮ, ಕಳೆದೊಂದು ವಾರದಿಂದ ದೃಢೀಕರಣ ಪ್ರಮಾಣ ಪತ್ರ (ಸಿಸಿ) ಮತ್ತು ಎನ್ಕಂಬರೆನ್ಸ್ ಪ್ರಮಾಣ ಪತ್ರ (ಇಸಿ) ಅರ್ಜಿಗಳು ವಿಲೇವಾರಿಯಾಗಿಲ್ಲ.
ಗುರುವಾರ ದಸ್ತಾವೇಜುಗಳ ನೋಂದಣಿ ಪ್ರಕ್ರಿಯೆಗೂ ಅಡ್ಡಿ ಉಂಟಾಗಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಜನರು ಹಿಡಿಶಾಪ ಹಾಕಿದರು. ಆರ್ಥಿಕ ವರ್ಷದ ಕೊನೆಯ ತಿಂಗಳೆಂದು ಮಾರ್ಚ್ನಲ್ಲಿ ಸ್ಥಿರಾಸ್ತಿಗಳ ವಹಿವಾಟಿನಲ್ಲಿ ಹೆಚ್ಚಳ ಆಗಲಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ25 ಸಾವಿರ ಕೋಟಿ ರೂ. ಆದಾಯ ಸಂಗ್ರಹ ಟಾರ್ಗೆಟ್ ತಲುಪುವ ಉದ್ದೇಶಕ್ಕೆ ಸಬ್ ರಿಜಿಸ್ಟ್ರಾರ್ ಕಚೇರಿ ಸಮಯವನ್ನು ಬೆಳಗ್ಗೆ 10.30ರಿಂದ ಸಂಜೆ 5.30ರ ಬದಲಿಗೆ ಬೆಳಗ್ಗೆ 9ರಿಂದ ಸಂಜೆ 6 ಗಂಟೆವರೆಗೂ ವಿಸ್ತರಣೆ ಮಾಡಲಾಗಿದೆ. ಜತೆಗೆ 2ನೇ ಮತ್ತು 4ನೇ ಶನಿವಾರ ಮತ್ತು ಎಲ್ಲ ಭಾನುವಾರವೂ ಕಚೇರಿ ತೆರೆಯಲಾಗುತ್ತಿದೆ. ಆದರೆ, ಮಾತ್ರ ಕಾವೇರಿ ಸ್ಟಾವೇರ್ನಲ್ಲಿ ದೋಷ ಕಂಡುಬಂದಿದ್ದು, ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿ ಉಂಟಾಗುತ್ತಿದೆ.
ಆಸ್ತಿ ಮಾರಾಟ, ಖರೀದಿಗೂ ಮೊದಲು ಇ.ಸಿ. ಪರಿಶೀಲನೆ ಅಗತ್ಯವಾಗಿರುತ್ತದೆ. ಅಲ್ಲದೆ, ಬ್ಯಾಂಕ್ ಸಾಲ, ಕೋರ್ಟ್ಗೆ ಸಲ್ಲಿಸಲು ಇನ್ನಿತರ ದೈನಂದಿನ ಕೆಲಸ ಕಾರ್ಯಕ್ಕೆ ಬೇಕಾಗಿರುವ ಋಣಭಾರ ಪ್ರಮಾಣ ಪತ್ರಕ್ಕೆ ಕಾವೇರಿ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಿ ವಾರದ ಕಳೆದರೂ ಜನರಿಗೆ ಸ್ವೀಕೃತಿಯಾಗಿಲ್ಲ. ಕೆಲವೊಂದು ವೇಳೆ ಶುಲ್ಕ ಪಡೆಯುವುದಿಲ್ಲ.
ಇ.ಸಿ.ಯಲ್ಲಿ ನೋಂದಣಿ ಮಾಹಿತಿಯೇ ಬರುತ್ತಿಲ್ಲ. ಇದೇ ರೀತಿಯಾಗಿ ದೃಢೀಕರಣ ಪ್ರಮಾಣ ಪತ್ರಗಳಿಗೂ ಅರ್ಜಿ ಸಲ್ಲಿಸಿ ವಾರವಾದರೂ ಸ್ವೀಕೃತಿಯಾಗಿಲ್ಲ. ಈ ಬಗ್ಗೆ ಸಬ್ ರಿಜಿಸ್ಟ್ರಾರ್ಗಳನ್ನು ಪ್ರಶ್ನಿಸಿದರೆ ಸ್ಟಾವೇರ್ನಲ್ಲಿ ತಾಂತ್ರಿಕ ಸಮಸ್ಯೆ ಎಂದಷ್ಟೇ ಉತ್ತರ ಕೊಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ದಸ್ತಾವೇಜು ನೋಂದಣಿಗೂ ವಿಘ್ನ
ಗುರುವಾರ ಬೆಳಗ್ಗೆಯಿಂದಲೇ ದಸ್ತಾವೇಜುಗಳ ನೋಂದಣಿಗೆ ಕಾವೇರಿ ತಂತ್ರಾಂಶ ಸ್ಪಂದಿಸಿಲ್ಲ. ಮೊದಲಿಗೆ ಲಾಗಿನ್ ಆಗಲು ಒಟಿಪಿ ಬಾರದೆ ಇರುವುದು, ಬಂದರೂ ದಾಖಲೆಗಳ ಅಪ್ಲೋಡ್ಗೆ ಸಾಕಷ್ಟು ಸಮಯ ಅವಕಾಶ ಪಡೆದಿದೆ. ಸಬ್ ರಿಜಿಸ್ಟ್ರಾರ್ಗಳ ಲಾಗಿನ್ನಲ್ಲೂ ತಾಂತ್ರಿಕ ಸಮಸ್ಯೆ ಉಂಟಾಗಿ ನೋಂದಣಿಗೆ ಒಪ್ಪಿಗೆ ಸೂಚಿಸಲು ಅವಕಾಶವಾಗಿಲ್ಲ. ಕೆಲವರಿಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಗೂ ಸಾಧ್ಯವಾಗದೆ ರಾತ್ರಿ 8 ಗಂಟೆ ವರೆಗೂ ಸ್ಟಾವೇರ್ ಸತಾಯಿಸಿದೆ.
ಸರ್ವರ್ ಸರಿಮಾಡಿ
ಸಬ್ ರಿಜಿಸ್ಟ್ರಾರ್ ಕಚೇರಿಗಳ ಕಾರ್ಯನಿರ್ವಹಿಸುವ ಸಮಯ ವಿಸ್ತರಣೆ ಮಾಡುವ ಬದಲು ಕಾವೇರಿ 2.0 ತಂತ್ರಾಂಶದಲ್ಲಿ ಯಾವುದೇ ದೋಷ ಇಲ್ಲದಂತೆ ನೋಡಿಕೊಂಡರೆ ಸಾಕು. ಸರ್ವರ್ ಸರಿ ಇದ್ದರೆ ದೈನಂದಿನ ಕೆಲಸಗಳಿಗೆ ಅಡ್ಡಿ ಉಂಟಾಗದೆ ಜನರಿಗೂ ನಿಗದಿತ ಸಮಯಕ್ಕೆ ಸೇವೆ ದೊರೆಯಲಿದೆ. ಆದರೆ, ಕಾವೇರಿ 2.0 ಸ್ಟಾವೇರ್ನಲ್ಲೇ ದೋಷ ಇದ್ದರೆ ಕಚೇರಿ ತೆರೆದುಕೊಂಡು ಕುಳಿತರೂ ಪ್ರಯೋಜನ ಇಲ್ಲವೆಂದು ಅಧಿಕಾರಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ.