ಕಾರವಾರ: ಕದ್ರಾ ಕರ್ನಾಟಕ ವಿದ್ಯುತ್ ನಿಗಮ(ಕೆಪಿಸಿ)ದ ಸುಪರಿಂಟೆಂಡೆಂಟ್ ಇಂಜಿನಿರ್ ಶ್ರೀಧರ ಕೋರಿ ಅವರನ್ನು ವರ್ಗಾಯಿಸುವಂತೆ ಶಾಸಕ ಸತೀಶ ಸೈಲ್ ಕೆಪಿಸಿ ಎಂಡಿ ಅವರಿಗೆ ಶಿಫಾರಸು ಮಾಡಿದ್ದಾರೆ.
ಭಾರಿ ಮಳೆಯಿಂದ ಕದ್ರಾ ಅಣೆಕಟ್ಟೆಯ ನೀರು ಬಿಟ್ಟಿರುವುದರಿಂದ ನೆರೆ ಮುನ್ನೆಚ್ಚರಿಕೆ ಕ್ರಮವಾಗಿ ಶಾಸಕ ಸತೀಶ ಸೈಲ್ ಶನಿವಾರ ಕದ್ರಾ ಕೆಪಿಸಿ ಐಬಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಸೈಲ್ ಹಾಗೂ ಕೆಪಿಸಿ ಎಸ್ಸಿ ನಡುವೆ ಮಾತಿನ ಚಕಮಕಿ ನಡೆಯಿತು.
ನಂತರ ಸೈಲ್ ಸ್ಥಳದಲ್ಲೇ ಕೆಪಿಸಿ ಎಂಡಿ ಅವರಿಗೆ ಕರೆ ಮಾಡಿ, ಒರಟಾಗಿ ವರ್ತಿಸುವ ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸದ ಎಸ್ಸಿ ನಮಗೆ ಬೇಕಿಲ್ಲ. ಇಲ್ಲಿಂದ ವರ್ಗಾಯಿಸಿ ಎಂದು ಶಿಫಾರಸು ಮಾಡಿದರು.
ಭಾರಿ ಮಳೆಯ ಮುನ್ಸೂಚನೆ ಇರುವುದರಿಂದ ಕದ್ರಾ ಅಣೆಕಟ್ಟೆಯಲ್ಲಿ ಗರಿಷ್ಠ ನೀರಿನ ಸಂಗ್ರಹಣೆಯನ್ನು 30 ಮೀಟರ್ಗೆ ಸೀಮಿತಗೊಳಿಸುವಂತೆ ಕೆಪಿಸಿ ಅಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ:ಇನ್ನೂ ಎರಡು ದಿನ ಭಾರಿ ಮಳೆ ಮುನ್ನೆಚ್ಚರಿಕೆ
ಈ ಸಂದರ್ಭದಲ್ಲಿ ತಾಲೂಕು ಆಡಳಿತದಿಂದ ನೇಮಕವಾದ ನೋಡಲ್ ಅಧಿಕಾರಿ ಗಜಾನನ ನಾಯ್ಕ ಮಾತನಾಡಲು ಎದ್ದು ನಿಂತು ಮಾತನಾಡಲಾರಂಭಿಸಿದರು. ಆದರೆ, ಕೆಪಿಸಿ ಎಂಜಿನಿಯರ್ ಮಧ್ಯೆ ತಡೆದು, ಅದೆಲ್ಲ ಬೇಕಿಲ್ಲ ಎಂದು ಆಕ್ಷೇಪಿಸಿದರು. ಇದರಿಂದ ಸಿಟ್ಟಿಗೆದ್ದ ಶಾಸಕ ಸೈಲ್ ಹಾಗೂ ಸ್ಥಳದಲ್ಲಿದ್ದ ಗ್ರಾಪಂ ಸದಸ್ಯರು ಕೆಪಿಸಿ ಎಸ್ಸಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಬಾಗಿನ ಅರ್ಪಣೆ
ಭಾರಿ ಮಳೆಯ ಮುನ್ಸೂಚನೆ ಇರುವುದರಿಂದ ಕದ್ರಾ ಅಣೆಕಟ್ಟೆಯ ಗರಿಷ್ಠ ಮಟ್ಟವನ್ನು 31 ಮೀಟರ್ ಬದಲು 30 ಮೀಟರ್ಗೆ ಸೀಮಿತ ಮಾಡಿ. ನೀರಿನ ಪ್ರಮಾಣ ಹೆಚ್ಚುವ ಮೊದಲೇ ಹಂತ, ಹಂತವಾಗಿ ನೀರು ಬಿಟ್ಟು ನೆರೆ ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು. ನಂತರ ಕದ್ರಾ ಅಣೆಕಟ್ಟೆಗೆ ತೆರಳಿ ಬಾಗಿನ ಅರ್ಪಿಸಿದರು.
ಹಾಗೊಮ್ಮೆ ನೆರೆ ಪರಿಸ್ಥಿತಿ ಸಂಭವಿಸಿದಲ್ಲಿ ತಾಲೂಕು ಆಡಳಿತದ ಜತೆ ಕೆಪಿಸಿ ಎಲ್ಲ ನೆರವಾಗಬೇಕು. ಕದ್ರಾ ಗ್ರಾಪಂ ಸದಸ್ಯರಾದ ಶ್ಯಾಮನಾಥ ನಾಯ್ಕ, ಅಶ್ವಿನಿ ಪೆಡ್ನೇಕರ್, ಮಲ್ಲಾಫುರ ಗ್ರಾಪಂ ಸದಸ್ಯ ಉದಯ ಬಾಂದೇಕರ್ ಇತರರು ಸಭೆಯಲ್ಲಿದ್ದರು.