ಬೆಂಗಳೂರು: ದೇಶೀಯ ಕ್ರಿಕೆಟ್ನ ಶಕ್ತಿಕೇಂದ್ರಗಳಲ್ಲಿ ಒಂದಾಗಿರುವ ಕರ್ನಾಟಕ, ರಾಷ್ಟ್ರೀಯ ತಂಡಕ್ಕೆ ಹಲವು ದಿಗ್ಗಜರನ್ನೇ ನೀಡಿದೆ. ಕೇವಲ ಟೆಸ್ಟ್, ಏಕದಿನ ಅಲ್ಲದೆ, ಐಪಿಎಲ್ನಲ್ಲೂ ಈಗ ಕನ್ನಡಿಗರ ಕಮಾಲ್ ಮುಂದುವರಿದಿದೆ. ಈ ಬಾರಿಯೂ ಐಪಿಎಲ್ 13ನೇ ಆವೃತ್ತಿಯಲ್ಲಿ ಕನ್ನಡಿಗರು ಪ್ರಭುತ್ವ ಸಾಧಿಸಲು ರೆಡಿಯಾಗಿದ್ದಾರೆ. ಈ ಬಾರಿ 8 ತಂಡಗಳ ಪೈಕಿ 5 ತಂಡಗಳಲ್ಲಿ ಕರ್ನಾಟಕದ ಒಟ್ಟಾರೆ 12 ಆಟಗಾರರು ಕಣಕ್ಕಿಳಿಯುತ್ತಿದ್ದಾರೆ. ಐಪಿಎಲ್ನಲ್ಲಿ ಆಡುತ್ತಿರುವ ರಾಜ್ಯದ ಹುಡುಗರ ಸಂಕ್ಷಿಪ್ತ ನೋಟ ಇಲ್ಲಿದೆ.
ಕಿಂಗ್ಸ್ ಇಲೆವೆನ್ ಕರ್ನಾಟಕ!
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಈ ಬಾರಿ ಬಹುತೇಕ ‘ಕಿಂಗ್ಸ್ ಇಲೆವೆನ್ ಕರ್ನಾಟಕ’ ಎನಿಸಿದೆ. ತಂಡದಲ್ಲಿ ಕರ್ನಾಟಕದ ಐವರು ಆಟಗಾರರಿದ್ದಾರೆ. ಆರ್ಸಿಬಿ ತಂಡದಲ್ಲೂ ಇದುವರೆಗೆ ಒಂದೇ ಆವೃತ್ತಿಯಲ್ಲಿ ರಾಜ್ಯದ ಇಷ್ಟು ಆಟಗಾರರು ಆಡಿದ್ದಿಲ್ಲ. ಜತೆಗೆ ತಂಡಕ್ಕೆ ಕನ್ನಡಿಗರೇ ಆದ ಅನಿಲ್ ಕುಂಬ್ಳೆ ಮುಖ್ಯಕೋಚ್ ಆಗಿದ್ದಾರೆ. ಕಳೆದ ಕೆಲ ಆವೃತ್ತಿಗಳಿಂದ ತಂಡದ ಭಾಗವಾಗಿರುವ ಸ್ಟಾರ್ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಮೊದಲ ಬಾರಿ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ನಾಯಕತ್ವದ ಜವಾಬ್ದಾರಿ ಜತೆಗೆ ಬ್ಯಾಟಿಂಗ್ನಲ್ಲೂ ಸ್ಥಿರತೆ ಕಾಯ್ದುಕೊಳ್ಳುವ ಒತ್ತಡ ರಾಹುಲ್ ಮೇಲಿದೆ. ರಾಹುಲ್ಗೆ ಬಲಗೈ ಬ್ಯಾಟ್ಸ್ಮನ್ಗಳಾದ ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಆಲ್ರೌಂಡರ್ಗಳಾದ ಕೆ.ಗೌತಮ್, ಜೆ.ಸುಚಿತ್ ಬಲವಿದೆ. ಕೆಎಲ್ ರಾಹುಲ್ ಐಪಿಎಲ್ ತಂಡವೊಂದರ ನಾಯಕತ್ವ ವಹಿಸಿಕೊಳ್ಳುತ್ತಿರುವ 3ನೇ ಕನ್ನಡಿಗರಾಗಿದ್ದಾರೆ. ಈ ಮುನ್ನ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಆರ್ಸಿಬಿ ನಾಯಕರಾಗಿದ್ದರು.
ರಾಯಲ್ಸ್ ತಂಡದಲ್ಲಿ ತ್ರಿಮೂರ್ತಿ ಕನ್ನಡಿಗರು
ಕರ್ನಾಟಕದ ಮಾಜಿ ಆಟಗಾರ ರಾಬಿನ್ ಉತ್ತಪ್ಪ, ಆಲ್ರೌಂಡರ್ಗಳಾದ ಶ್ರೇಯಸ್ ಗೋಪಾಲ್ ಹಾಗೂ ಅನಿರುದ್ಧ ಜೋಷಿ ರಾಜಸ್ಥಾನ ರಾಯಲ್ಸ್ ತಂಡದ ಪರ ಅಖಾಡಕ್ಕಿಳಿಯಲಿದ್ದಾರೆ. ರಾಬಿನ್ ಉತ್ತಪ್ಪ ಆರಂಭಿಕ ಲೀಗ್ನಿಂದಲೂ ಆಡುತ್ತಿದ್ದು, ಬ್ಯಾಟಿಂಗ್ ವಿಭಾಗದಲ್ಲಿ ಮಿಂಚುವ ತವಕದಲ್ಲಿದ್ದಾರೆ. ಈ ಹಿಂದೆ ಕೆಕೆಆರ್ ತಂಡದ ಪ್ರಮುಖ ಭಾಗವಾಗಿದ್ದ ಉತ್ತಪ್ಪ, ಮಾಜಿ ಚಾಂಪಿಯನ್ ರಾಯಲ್ಸ್ ಪರ ಮೊದಲ ಬಾರಿ ಆಡಲಿದ್ದಾರೆ. ಆಲ್ರೌಂಡರ್ ಶ್ರೇಯಸ್ ಗೋಪಾಲ್ ಎಂದಿನಂತೆ ಸ್ಪಿನ್ ವಿಭಾಗದಲ್ಲಿ ಪ್ರಮುಖ ಅಸವಾಗಿದ್ದಾರೆ.
ಇದನ್ನೂ ಓದಿ: ರೈನಾ ಸ್ಥಾನ ತುಂಬುವ ಫೇವರಿಟ್ ಆಟಗಾರ ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಅನುಮಾನ
ಆರ್ಸಿಬಿಯಲ್ಲಿ ಪಡಿಕಲ್ ಮೇಲೆ ನಿರೀಕ್ಷೆ
ಯುವ ಬ್ಯಾಟ್ಸ್ಮನ್ ದೇವದತ್ ಪಡಿಕಲ್ ಹಾಗೂ ಅನುಭವಿ ಆಟಗಾರ ಪವನ್ ದೇಶಪಾಂಡೆ ಈ ಬಾರಿ ಆರ್ಸಿಬಿ ಪರ ಪದಾರ್ಪಣೆ ಮಾಡುವ ಕನಸಿನಲ್ಲಿದ್ದಾರೆ. ಪವನ್ ಕಳೆದ ಬಾರಿ ತಂಡದಲ್ಲಿದ್ದರೂ ಆಡಿರಲಿಲ್ಲ. ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ರನ್ಪ್ರವಾಹ ಹರಿಸಿ ಗಮನ ಸೆಳೆದಿದ್ದ ದೇವದತ್ ಪಡಿಕಲ್, ಆರ್ಸಿಬಿ ತಂಡದಲ್ಲಿ ಇನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ.
ಕೆಕೆಆರ್ ಪರ ಪ್ರಸಿದ್ಧ್ ಕಮಾಲ್
ಭರವಸೆಯ ಯುವ ವೇಗಿ ಪ್ರಸಿದ್ಧ್ ಕೃಷ್ಣ ಕೆಕೆಆರ್ ತಂಡದಲ್ಲಿರುವ ಏಕೈಕ ಕನ್ನಡಿಗ. ಕಳೆದ 2 ಆವೃತ್ತಿಗಳಿಂದ ಕೆಕೆಆರ್ ತಂಡದ ಪ್ರಮುಖ ವೇಗಿಯೂ ಆಗಿರುವ ಪ್ರಸಿದ್ಧ್ ಕೃಷ್ಣ ಈ ಬಾರಿಯೂ ಉತ್ತಮ ನಿರ್ವಹಣೆ ತೋರುವ ನಿರೀಕ್ಷೆಯಲ್ಲಿದ್ದಾರೆ.
ಸನ್ರೈಸರ್ಸ್ಗೆ ಪಾಂಡೆ ಶಕ್ತಿ
ಭರವಸೆಯ ಬ್ಯಾಟ್ಸ್ವನ್ ಮನೀಷ್ ಪಾಂಡೆ ಸನ್ರೈಸರ್ಸ್ ಹೈದರಾಬಾದ್ ತಂಡದ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಆರ್ಸಿಬಿ, ಪುಣೆ ವಾರಿಯರ್ಸ್, ಕೆಕೆಆರ್ ತಂಡದ ಪರ ಆಡಿದ ಅನುಭವ ಹೊಂದಿರುವ ಮನೀಷ್ ಪಾಂಡೆ, ಚುರುಕಿನ ಫೀಲ್ಡರ್ ಕೂಡ ಆಗಿದ್ದಾರೆ.