ರಾಣೆಬೆನ್ನೂರ: ಕನ್ನಡ ಚಲನಚಿತ್ರ ರಂಗದ ಕಲಾವಿದ ದ್ವಾರಕೀಶ್ ನಿಧನದ ಹಿನ್ನೆಲೆಯಲ್ಲಿ ಸ್ಥಳೀಯ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬುಧವಾರ ನಗರದ ಪೋಸ್ಟ್ ವೃತ್ತದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಘಟನೆಯ ಅಧ್ಯಕ್ಷ ನಿತ್ಯಾನಂದ ಕುಂದಾಪುರ ಮಾತನಾಡಿ, ದ್ವಾರಕೀಶ್ ಅವರದು ಮೂರ್ತಿ ಚಿಕ್ಕದಾದರೂ ಕನ್ನಡ ಚಲನಚಿತ್ರ ರಂಗದಲ್ಲಿ ವಿಶಿಷ್ಟ ನಟನೆಯ ಮೂಲಕ ತಮ್ಮದೆಯಾದ ಛಾಪು ಮೂಡಿಸಿದ ಮೇರು ಕಲಾವಿದರಾಗಿದ್ದರು. ರಾಜಕುಮಾರ, ವಿಷ್ಣುವರ್ಧನ ಮುಂತಾದ ದಿಗ್ಗಜ್ಜರ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಹಲವಾರು ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದ ಶ್ರೇಯಸ್ಸು ಇವರದ್ದಾಗಿದೆ. ಇವರ ಸಾವು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದರು.
ಪ್ರಮುಖರಾದ ಕೊಟ್ರೇಶಪ್ಪ ಎಮ್ಮಿ, ಚಂದ್ರಪ್ಪ ಬತ್ತಿಕೊಪ್ಪ, ನಾಗರಾಜ ದಾವಣಗೆರೆ, ಬಾಷಾ ಹಂಪಪಟ್ಟಣ, ಅಶೋಕ ಆರ್., ಎಲ್ಲಪ್ಪ ಜಿ. ಬಿ., ಎಸ್.ಎನ್. ಭೂತೆ, ಶಿವಯೋಗಿ ಬೆಲ್ಲದ ಮತ್ತಿತರರು ಪಾಲ್ಗೊಂಡಿದ್ದರು.