More

    ಬಂಗಾರಪ್ಪರನ್ನು ಗೆಲ್ಲಿಸಿದ್ದು ಬಿಜೆಪಿ ಚೇಲಾಗಳೇ

    ಶಿವಮೊಗ್ಗ: ನಾನು ಹಿಂದುತ್ವವಾದಿ. ನನಗೆ ಮತ ನೀಡಿ ಎಂದು ಕೆಲವರು ಚುನಾವಣೆ ಸಂದರ್ಭ ಮತದಾರರ ಎದುರು ಬರುತ್ತಾರೆ. ಅಂಥವರ ಬಗ್ಗೆ ಚಿಂತೆಪಡಬೇಕಾದ ಅಗತ್ಯವಿಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

    ಬಿಜೆಪಿಯಿಂದ ಗುರುವಾರ ಏರ್ಪಡಿಸಿದ್ದ ಮಹಿಳಾ ಮೋರ್ಚಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಬಿಜೆಪಿ ಕಾರ್ಯಕರ್ತರನ್ನು ಚೇಲಾಗಳು ಎಂದಿದ್ದಾರೆ. ಅವರ ತಂದೆಯನ್ನು 2004ರ ಚುನಾವಣೆಯಲ್ಲಿ ಗೆಲ್ಲಿಸಿದ್ದು ಇದೇ ಚೇಲಾಗಳು ಎಂಬುದು ಅವರಿಗೆ ತಿಳಿದಂತಿಲ್ಲ ಎಂದು ಟಾಂಗ್ ನೀಡಿದರು.
    ಲೋಕಸಭೆ ಕಲಾಪವಿದ್ದ ಸಂದರ್ಭ ಮಾತ್ರ ನಾನು ದೆಹಲಿಗೆ ಹೋಗುತ್ತಿದ್ದೆ. ಉಳಿದ ಸಮಯವನ್ನೆಲ್ಲ ಕ್ಷೇತ್ರದಲ್ಲೇ ಕಳೆದಿದ್ದೇನೆ. ಲೋಕಸಭೆಯ ವಿವಿಧ ಸಮಿತಿ ಸದಸ್ಯನಾದ ನನಗೆ ಅನೇಕ ಬಾರಿ ವಿದೇಶ ಪ್ರವಾಸಗಳ ಅವಕಾಶ ಬಂದಿತ್ತು. ಪ್ರವಾಸ ತೆರಳಿದರೆ ಕ್ಷೇತ್ರಕ್ಕೆ ಹೆಚ್ಚು ಸಮಯ ನೀಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ವಿದೇಶ ಪ್ರವಾಸದಿಂದ ದೂರವುಳಿದೆ ಎಂದರು.
    ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ಎಲ್ಲರೂ ಕನಸು ಕಾಣುತ್ತಾರೆ. ಆದರೆ ಕನಸು ನನಸು ಮಾಡುವ ಶಕ್ತಿ ಇರುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ. ರಾಮ ಮಂದಿರದ 500 ವರ್ಷಗಳ ಕನಸನ್ನು ನನಸು ಮಾಡಿದ್ದು ಮೋದಿ ಎಂದು ಬಣ್ಣಿಸಿದರು.
    ಮಹಿಳಾ ಮೀಸಲಾತಿ, ಸಬಲೀಕರಣ ಮೋದಿ ಅವರ ಕೊಡುಗೆ. ಬಿಜೆಪಿಗೆ ಏಕೆ ಮತ ನೀಡಬೇಕು ಎಂಬುದನ್ನು ಜನರಿಗೆ ನಮ್ಮ ಕಾರ್ಯಕರ್ತರು ಮನವರಿಕೆ ಮಾಡಿಕೊಡಬೇಕು. ನಾವು ಸ್ವಲ್ಪ ಯಾಮಾರಿದರೂ ದೇಶಕ್ಕೆ ತೊಂದರೆ. ಈಗಾಗಲೇ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ತಿಳಿದುಬಂದಿದೆ. ದೇಶದಲ್ಲಿ ಸೈನಿಕರು, ಮಹಿಳೆಯರು, ರೈತರು ಸೇರಿ ಎಲ್ಲ ವರ್ಗದವರು ನೆಮ್ಮದಿಯಿಂದ ಬದಕಲು ನರೇಂದ್ರ ಮೋದಿ ಅನಿವಾರ್ಯ ಎಂದು ಹೇಳಿದರು.
    ಶಾಸಕ ಎಸ್.ಎನ್.ಚನ್ನಬಸಪ್ಪ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಗಾಯತ್ರಿದೇವಿ, ಜಿಲ್ಲಾ ವಕ್ತಾರ ಎಸ್.ಎಸ್.ಜ್ಯೋತಿಪ್ರಕಾಶ್, ಪಾಲಿಕೆ ಮಾಜಿ ಸದಸ್ಯರಾದ ಅನಿತಾ ರವಿಶಂಕರ್, ಸುರೇಖಾ ಮುರುಳೀಧರ, ಮೋಹನ್ ರೆಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts