ಲಾಕ್ಡೌನ್ ನಂತರ ಕೆಲವು ರಾಜ್ಯಗಳಲ್ಲಿ ಸಿನಿಮಾ ಮತ್ತು ಧಾರಾವಾಹಿಗಳ ಶೂಟಿಂಗ್ಗೇನೋ ಅನುಮತಿ ನೀಡಲಾಗಿದೆ. ಆದರೆ, ಇದುವರೆಗೂ ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಅನುಮತಿ ಕೊಟ್ಟಿಲ್ಲ. ಹಾಗಾಗಿ ರಿಯಾಲಿಟಿ ಶೋ ಮಾಡುತ್ತಿದ್ದವರೆಲ್ಲಾ ಮನೆಯಲ್ಲಿ ಖಾಲಿ ಕೂರುವಂತಾಗಿದೆ.
ಆದರೆ, ಕಪಿಲ್ ಶರ್ಮ ಮಾತ್ರ ಆದಷ್ಟು ಬೇಗ ವಾಪಸ್ಸು ಬರುವುದಕ್ಕೆ ಉತ್ಸುಕರಾಗಿದ್ದಾರೆ. ಅಷ್ಟೇ ಅಲ್ಲ, ಅವಕಾಶ ಸಿಕ್ಕರೆ ತಮ್ಮ ‘ಕಪಿಲ್ ಶರ್ಮ ಶೋ’ ಚಿತ್ರೀಕರಣವನ್ನು ಜುಲೈ ಮಧ್ಯಭಾಗದಿಂದ ಪ್ರಾರಂಭಿಸುವುದಕ್ಕೆ ಸಜ್ಜಾಗಿದ್ದಾರೆ.
ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ ಒಂದು ಇನ್ಸ್ಟಾಗ್ರಾಂ ಪೋಸ್ಟ್ಗೆ ಪಡೆಯುವ ಮೊತ್ತ ಎಷ್ಟಿರಬಹುದು?
ಈಗಾಗಲೇ ಕಪಿಲ್ ಶರ್ಮ ತಮ್ಮ ತಂಡದವರಿಗೆ ಚಿತ್ರೀಕರಣಕ್ಕೆ ರೆಡಿಯಾಗುವಂತೆ ಸೂಚನೆ ನೀಡಿದ್ದು, ಕಲಾವಿದರೆಲ್ಲಾ ಈಗಾಗಲೇ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಕಪಿಲ್, ಕೃಷ್ಣ ಅಭಿಷೇಕ್, ಭಾರತೀ ಸಿಂಗ್, ಚಂದನ್ ಪ್ರಭಾಕರ್, ಕಿಕು ಶಾರದಾ ಮುಂತಾದವರು ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ರಿಹರ್ಸಲ್ ಸಹ ಶುರು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಎಂದಿನಂತೆ ನಗುವುದಕ್ಕೆ ಮತ್ತು ನಗಿಸುವುದಕ್ಕೆ ಅರ್ಚನಾ ಪೂರಣ್ ಸಿಂಗ್, ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಅದಲ್ಲದೆ ಪ್ರತಿ ಕಂತಿನಲ್ಲೂ ಒಂದೊಂದು ಚಿತ್ರತಂಡ ಅಥವಾ ಸೆಲೆಬ್ರಿಟಿ ವಿಶೇಷ ಅತಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಮುಂದಿನ ದಿನಗಳಲ್ಲಿ ಯಾರನ್ನೆಲ್ಲಾ ಕರೆಸಬಹುದು ಎಂಬ ಲೆಕ್ಕಾಚಾರಗಳೂ ಶುರುವಾಗಿದೆಯಂತೆ.
ಇದನ್ನೂ ಓದಿ: ನಿಮ್ಮ ಸೋಲನ್ನೂ ಪ್ಲಾನ್ ಮಾಡೋ ಜನರಿದ್ದಾರೆ: ರವೀನಾ ಟಂಡನ್
ಮೂಲಗಳ ಪ್ರಕಾರ, ಕಾರ್ಯಕ್ರಮ ಶುರುವಾದರೆ, ಮೊದಲ ಅತಿಥಿಯಾಗಿ ಸೋನು ಸೂದ್ ಬರಲಿದ್ದಾರೆ. ಸೋನು ಇತ್ತೀಚೆಗಷ್ಟೇ, ಮುಂಬೈನಲ್ಲಿ ಉಳಿದಿದ್ದ ವಲಸೆ ಕಾರ್ಮಿಕರನ್ನು ತಮ್ಮ ಹುಟ್ಟೂರಿಗೆ ಕಳಿಸಿ, ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಸೋನುರಂಥವರು ಇದ್ದರೆ, ಚೆನ್ನ ಎಂಬ ಕಾರಣಕ್ಕೆ ಅವರನ್ನು ಮೊದಲ ಕಂತಿನ ಅತಿಥಿಯಾಗಿ ಕರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಬಾರಿ ಕಾರ್ಯಕ್ರಮದಲ್ಲಿ ಒಂದು ದೊಡ್ಡ ಬದಲಾವಣೆಯಾಗಲಿದ್ದು, ಪ್ರತಿ ಬಾರಿಯಂತೆ ಕಾರ್ಯಕ್ರಮ ವೀಕ್ಷಿಸಲು ಸೆಟ್ನಲ್ಲಿ ಜನ ಇರುವುದಿಲ್ಲವಂತೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ, ಜನರನ್ನು ದೂರವಿಟ್ಟು, ಪರ್ಯಾಯ ವ್ಯವಸ್ಥೆಯೊಂದನ್ನು ಮಾಡುವುದಕ್ಕೆ ಕಾರ್ಯಕ್ರಮದ ಆಯೋಜಕರು ಯೋಚಿಸುತ್ತಿದ್ದು, ಶೀಘ್ರದಲ್ಲೇ ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.
ಬಲವಾದ ಕಾರಣ ಹೊತ್ತು ನಾಡಿನ ಅಭಿಮಾನಿಗಳನ್ನು ಭೇಟಿ ಮಾಡಲು ಬರುತ್ತಿದ್ದಾರೆ ಕಿಚ್ಚ ಸುದೀಪ್